ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ಸಿ.ಎಂ. ಇಬ್ರಾಹಿಂ ಅವರ ಮನವೊಲಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ. ತಮ್ಮ ಆಪ್ತ ಎಚ್.ಸಿ. ಮಹದೇವಪ್ಪ ಮೂಲಕ ಇಬ್ರಾಹಿಂ ಜೊತೆ ಸಂಧಾನ ನಡೆಸಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ.
ಇಬ್ರಾಹಿಂ ಅವರ ಮನೆಗೆ ಸೋಮವಾರ ಭೇಟಿ ನೀಡಿ ಕೆಲಹೊತ್ತು ಮಾತುಕತೆ ನಡೆಸಿರುವ ಮಹದೇವಪ್ಪ, ಸಿದ್ದರಾಮಯ್ಯ ಅವರ ಸಂದೇಶವನ್ನು ತಲುಪಿಸಿದ್ದಾರೆ. ‘ಕಾಂಗ್ರೆಸ್ ತ್ಯಜಿಸಬೇಡಿ, ಮುಂದೆ ಸ್ಥಾನಮಾನ ಸಿಗುತ್ತದೆ’ ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಇಬ್ರಾಹಿಂ ಜೊತೆ ಮಾತನಾಡಿರುವುದಾಗಿ ಮಹದೇವಪ್ಪ ಹೇಳಿದ್ದಾನೆ. ಎಲ್ಲರೊಂ ದಿಗೆ ಚರ್ಚಿಸುತ್ತೇನೆ ಎಂದು ಮಹದೇವಪ್ಪನಿಗೆ ಇಬ್ರಾಹಿಂ ಹೇಳಿದ್ದಾನೆ.ನಾನು ಕರೆ ಮಾಡಿಯಷ್ಟೇ ಅಲ್ಲ, ಮನೆಗೂ ಹೋಗಿ ಮಾತನಾಡುತ್ತೇನೆ’ ಎಂದರು.