ಬೆಂಗಳೂರು:ಜನಾರ್ದನ ಹೋಟೆಲ್ನಲ್ಲಿ ಮಸಾಲೆ ಬೆಲೆ ಎಷ್ಟು? ₹60 ಆಗಿದೆಯಾ,ನಾನು ಯಾವತ್ತೂ ಬಿಲ್ ಕೊಟ್ಟಿಲ್ಲ, ಸ್ನೇಹಿತರೇ ಕೊಡ್ತಾರೆ’.
– ಹೀಗೆಂದುವಿಧಾನ ಸಭೆಯಲ್ಲಿ ಬೆಲೆ ಏರಿಕೆಯ ಬಗ್ಗೆ ಸ್ವಾರಸ್ಯಕರ ಚರ್ಚೆಗೆಸಿದ್ದರಾಮಯ್ಯ ನಾಂದಿ ಹಾಡಿದರು.
‘ಹೋಟೆಲ್ಗಳಲ್ಲಿ ತಿಂಡಿ ಬೆಲೆ ದುಬಾರಿಯಾಗಿದೆ. ಇಡ್ಲಿ– ವಡೆ ಬೆಲೆ ಎಷ್ಟಿದೆ’ ಎಂದು ತಮ್ಮ ಪಕ್ಷದ ಸದಸ್ಯರತ್ತ ತಿರುಗಿ ಪ್ರಶ್ನಿಸಿದರು. ಯಾರೋ ಒಬ್ಬರು ‘₹39 ಆಗಿದೆ’ ಎಂದರು. ‘ಹೋಟೆಲ್ಗಳಲ್ಲಿ ತಿಂಡಿ ಬೆಲೆ ಜಾಸ್ತಿ ಆಗಿದ್ದರಿಂದ ಅಲ್ಲಿಗೆ ಹೋಗುತ್ತಿಲ್ಲ’ ಎಂದರು ಸಿದ್ದರಾಮಯ್ಯ.
‘ಅಡುಗೆ ಅನಿಲ, ಖಾದ್ಯ ತೈಲದ ಬೆಲೆ ಏರಿಕೆ ಆಗಿದ್ದರಿಂದ ತಿಂಡಿಗಳ ಬೆಲೆ ಜಾಸ್ತಿ ಆಗಿದೆ’ ಎಂದು ಸಿದ್ದರಾಮಯ್ಯ ವಿವರಿಸುತ್ತಿದ್ದಾಗ, ಗೃಹ ಸಚಿವ ಆರಗ ಜ್ಞಾನೇಂದ್ರ ಮಧ್ಯ ಪ್ರವೇಶಿಸಿ, ‘ಕೇವಲ ಅದೇ ಕಾರಣಗಳಿಗೆ ಬೆಲೆ ಜಾಸ್ತಿ ಆಗಿಲ್ಲ, ಅಕ್ಕಿ ಬೆಲೆಯೂ ಹೆಚ್ಚಾಗಿದೆ. ಅಕ್ಕಿ ಬೆಲೆ ಹೆಚ್ಚಾಗಿದ್ದರಿಂದ ರೈತರಿಗೆ ಒಳ್ಳೆ ದರ ಸಿಗುತ್ತಿದೆ’ ಎಂದರು.
‘ಜ್ಞಾನೇಂದ್ರ ಅವರಿಗೆ ಬೆಲೆ ಏರಿಕೆಯ ಬಿಸಿ ಗೊತ್ತಾಗಿಲ್ಲ. ನಿಮ್ಮ ಹೋಂ ಮಿನಿಸ್ಟರ್ಗೆ ಕೇಳಿ ಆಗ ಗೊತ್ತಾಗುತ್ತದೆ. ಡೀಸೆಲ್ ದರ ಹೆಚ್ಚಾದರೆ ಸಾಗಾಣಿಕೆ ದರ ಹೆಚ್ಚುತ್ತದೆ. ಅಡುಗೆ ಅನಿಲ ದರ ದುಪ್ಪಟ್ಟು ಆಗಿಲ್ಲವೇ, ನೀವು ನಿಮ್ಮ ಮನೆಯವರಿಗೆ ಇಂತಿಷ್ಟು ಅಂತ ದುಡ್ಡು ಕೊಟ್ಟು ಸುಮ್ಮನಾಗುತ್ತೀರಿ. ಬೆಲೆ ಏರಿಕೆ ಬಗ್ಗೆ ರಾತ್ರಿ ಹೋಂ ಮಿನಿಸ್ಟರ್ ಬಳಿ ಕೇಳಿ, ಬೆಳಿಗ್ಗೆ ಸದನಕ್ಕೆ ಹೇಳಿ ’ ಎಂದು ಸಿದ್ದರಾಮಯ್ಯ ತಿಳಿ ಹಾಸ್ಯದಿಂದ ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.