ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ವ್ಯವಸ್ಥೆಯೇ ಭ್ರಷ್ಟಾಚಾರಕ್ಕೆ ಬುನಾದಿ: ಸಿದ್ದರಾಮಯ್ಯ

ವಿಧಾನಸಭೆ ವಿರೋಧ ಪಕ್ಷದ ನಾಯಕ ಅಭಿಪ್ರಾಯ
Last Updated 21 ಮಾರ್ಚ್ 2021, 15:44 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾತಿ ವ್ಯವಸ್ಥೆಯು ಸಮಾಜದ ಬಹುದೊಡ್ಡ ಪಿಡುಗು. ಭ್ರಷ್ಟಾಚಾರಕ್ಕೆ ಇದೇ ಬುನಾದಿ. ಸಂತರು, ಸೂಫಿಗಳು, ದಾರ್ಶನಿಕರು, ಸಮಾಜ ಸುಧಾರಕರು ಎಷ್ಟೆಲ್ಲಾ ಪ್ರಯತ್ನಪಟ್ಟರೂ ಈ ಪಿಡುಗನ್ನು ಬೇರು ಸಹಿತ ಕಿತ್ತೊಗೆಯಲು ಆಗಿಲ್ಲ. ಈ ವ್ಯವಸ್ಥೆ ಜೀವಂತವಾಗಿರುವವರೆಗೂ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಎಚ್‌.ಎಂ.ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ‘ಎಚ್‌.ಎಂ.ರೇವಣ್ಣ–ಅಭಿನಂದನೆ ಮತ್ತು ಗ್ರಂಥಗಳ ಬಿಡುಗಡೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಬಡವರು ಹಾಗೂ ಶೋಷಣೆಗೆ ಒಳಪಟ್ಟವರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವುದು ನಿಜವಾದ ರಾಜಕಾರಣ. ಬಡವರು ಮುಖ್ಯವಾಹಿನಿಗೆ ಬರದೇ ಹೋದರೆ ಸಮ ಸಮಾಜದ ಆಶಯ ಈಡೇರುವುದಿಲ್ಲ. ರಾಜಕೀಯ ಸ್ವಾತಂತ್ರ್ಯದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸೇರಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಬಿ.ಆರ್‌.ಅಂಬೇಡ್ಕರ್‌ ಅವರೇ ಹೇಳಿದ್ದಾರೆ. ತಮ್ಮ ಜಾತಿಯವರು ಎಂಬ ಕಾರಣಕ್ಕೆ ಭ್ರಷ್ಟ ರಾಜಕಾರಣಿ ಹಾಗೂ ಅಧಿಕಾರಿಗಳನ್ನು ಜನರೇ ಸಮರ್ಥಿಸಿಕೊಳ್ಳುತ್ತಾರೆ. ಈ ಧೋರಣೆ ಬದಲಾಗಬೇಕು’ ಎಂದರು.

‘ನನ್ನ ಅಧಿಕಾರಾವಧಿಯಲ್ಲಿ ಎಲ್ಲಾ ಸಮುದಾಯಗಳಲ್ಲಿರುವ ಬಡವರ ಏಳ್ಗೆಗೆ ಶ್ರಮಿಸಿದ್ದೆ. ಕುರುಬ ಸಮುದಾಯಕ್ಕೆ ಸೇರಿದ ವ್ಯಕ್ತಿ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಬಾರದು ಎಂಬ ಕಾರಣಕ್ಕೆ ನಮ್ಮ ಪಕ್ಷಕ್ಕೆ ಬಹುಮತ ಸಿಗದಂತೆ ಮಾಡಿದರು. ಇಂತಹ ವ್ಯವಸ್ಥೆಯಲ್ಲಿ ರಾಜಕಾರಣ ಮಾಡುವುದು ತುಂಬಾ ಕಷ್ಟ’ ಎಂದು ತಿಳಿಸಿದರು.

‘ರೇವಣ್ಣ ಸಂಘಟನಾ ಚತುರ. ಅಹಿಂದ ಚಳುವಳಿಯ ವೇಳೆ ನನ್ನ ಬೆನ್ನೆಲುಬಾಗಿ ಕೆಲಸ ಮಾಡಿದ್ದರು. ಕುರುಬರ ಎಸ್‌ಟಿ ಹೋರಾಟ ಸಮಾವೇಶ ಯಶಸ್ವಿಯಾಗಲು ಅವರೇ ಕಾರಣ. ನಾನು ಬರಲ್ಲ ಎಂದು ಹೇಳಿದರೂ ಕೂಡ ಹೋದಲೆಲ್ಲಾ ನನ್ನ ಹೆಸರು ಹೇಳಿ ಜನರನ್ನು ಸೇರಿಸಿದ್ದರು’ ಎಂದರು.

ಸಾಹಿತಿ ಹಾಗೂ ಹಿರಿಯ ರಾಜಕಾರಣಿ ಎಂ.ವೀರಪ್ಪ ಮೊಯಿಲಿ ‘ರೇವಣ್ಣ ನಾನು ಗುರುತಿಸಿದ ಶಾಸಕ. ಅವರು ಜನಪರ ಕೆಲಸಗಳನ್ನು ಮಾಡುತ್ತಾ ಇಷ್ಟು ಎತ್ತರಕ್ಕೆ ಬೆಳೆದಿರುವುದು ಹೆಮ್ಮೆಯ ವಿಷಯ’ ಎಂದು ತಿಳಿಸಿದರು.

‘ನಮ್ಮದು 35 ವರ್ಷಗಳ ಗೆಳೆತನ. ರಾಜಕಾರಣದಲ್ಲಿ ದ್ವೇಷ, ಅಸೂಯೆ ಹೆಚ್ಚು. ಹೀಗಿದ್ದರೂ ನಾನು, ರೇವಣ್ಣ ಮತ್ತು ಸಿದ್ದರಾಮಯ್ಯ ಒಂದೇ ಕುಟುಂಬದ ಸದಸ್ಯರಂತಿದ್ದೇವೆ. ರೇವಣ್ಣ, ಸ್ನೇಹಕ್ಕೆ ಅಪಾರ ಬೆಲೆ ಕೊಡುವ ವ್ಯಕ್ತಿ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ‘ನಾನು ಮತ್ತು ರೇವಣ್ಣ ಜೊತೆ ಜೊತೆಯಾಗಿಯೇ ಬೆಳೆದವರು. ಅವರು ಉತ್ತಮ ಕಬಡ್ಡಿ ಆಟಗಾರ’ ಎಂದು ಹೇಳಿದರು.

‘ವಿರತ ಶ್ರಮದಿಂದ ಸಾಮಾನ್ಯ ವ್ಯಕ್ತಿಯೊಬ್ಬ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ನಾನೂ ಕೂಡ ನಿದರ್ಶನ. ಇವತ್ತಿನ ರಾಜಕಾರಣ ಹಣಬಲ ಮತ್ತು ತೋಳ್ಬಲದ ಮೇಲೆ ನಡೆಯುತ್ತಿದೆ. ಇಂತಹ ವ್ಯವಸ್ಥೆಯಲ್ಲಿ ನಾವು ಸ್ವಂತ ಬಲದಿಂದ ಮೇಲಕ್ಕೇರಿದ್ದೇವೆ. ನನ್ನ ಯಶಸ್ಸಿನಲ್ಲಿ ಪತ್ನಿಯ ಕಾಣಿಕೆಯೂ ಬಹುದೊಡ್ಡದಿದೆ’ ಎಂದು ಎಚ್‌.ಎಂ.ರೇವಣ್ಣ ತಿಳಿಸಿದರು.

ಕವಿ ಸಿದ್ದಲಿಂಗಯ್ಯ ‘ಬೂಸಾ ಚಳವಳಿ ವೇಳೆ ನನ್ನ ಮೇಲೆ ಹಲ್ಲೆ ನಡೆದಿತ್ತು. ಆಗ ರೇವಣ್ಣ ನನ್ನ ಜೀವ ಉಳಿಸಿದ್ದರು. ಈ ವೇದಿಕೆಯಲ್ಲಿ ಕುಳಿತು ಮಾತನಾಡುತ್ತಿರುವುದಕ್ಕೆ ಅವರೇ ಕಾರಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT