ತುಮರಿ: ನಾಡಿನ ಪ್ರಸಿದ್ಧ ಶಕ್ತಿ ದೇವತೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಜನವರಿ 14, 15ರಂದು ಮಕರ ಸಂಕ್ರಮಣದ ಅಂಗವಾಗಿ ಜಾತ್ರಾ ಮಹೋತ್ಸವ ನಡೆಯಲಿದೆ.
ಜ.14ರಂದು ಬೆಳಿಗ್ಗೆ 7ಕ್ಕೆ ಚೌಡೇಶ್ವರಿ ದೇವಿಯ ಮೂಲ ಸ್ಥಳವಾದ ಸೀಗೆ ಕಣಿವೆಯಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ ಜಾತ್ರೋತ್ಸವ ಉದ್ಘಾಟಿಸುವರು ಎಂದು ಸಿಗಂದೂರು ಕ್ಷೇತ್ರದ ಧರ್ಮಾಧಿಕಾರಿ ಎಸ್. ರಾಮಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೀಗೆ ಕಣಿವೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಥಮ ಪೂಜೆ ನಡೆಯಲಿದೆ. ನಂತರ ಧರ್ಮಾಧಿಕಾರಿ ನೇತೃತ್ವದಲ್ಲಿ ಜ್ಯೋತಿ ರೂಪದ ದೇವಿಯ ಮೆರವಣಿಗೆ ನಡೆಯಲಿದ್ದು, ವಡನ್ಬೈಲ್ ಪದ್ಮಾವತಿ ದೇವಸ್ಥಾನದ ಧರ್ಮದರ್ಶಿ ವೀರರಾಜಯ್ಯ ಜೈನ್ ಚಾಲನೆ ನೀಡಲಿದ್ದಾರೆ. ದೇವಿಗೆ ಪ್ರತಿದಿನ ವಿವಿಧ ಅಭಿಷೇಕ, ಅಲಂಕಾರ ಪೂಜೆ ನಡೆಯಲಿದೆ.
ಮಧ್ಯಾಹ್ನ 2.30ಕ್ಕೆ ಧಾರ್ಮಿಕ ಸಭೆ ಏರ್ಪಡಿಸಲಾಗಿದ್ದು, ಕಲೆ, ಶಿಕ್ಷಣ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಜ. 15ರಂದು ರಾತ್ರಿ 8ಕ್ಕೆ ಗಾನ ವೈಭವ ನಡೆಯಲಿದೆ ಎಂದು ತಿಳಿಸಿದರು.