ಮಂಗಳೂರು: ಗೋಹತ್ಯೆ ನಿಷೇಧ ಮಸೂದೆ ವಿಧಾನ ಸಭೆಯಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೋಪೂಜೆ ನೆರವೇರಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ಹೀಗಾಗಿ ಬಿಜೆಪಿ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧದ ಮಸೂದೆ ಮಂಡನೆ ಮಾಡಿದೆ. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ದೇಶದಲ್ಲಿ ಗೋ ಸಂಸ್ಕೃತಿಯ ರಕ್ಷಣೆಗಾಗಿ ಈ ಮಸೂದೆ ಬಂದಿದೆ. ಈ ಹಿಂದೆ ಮಸೂದೆಯನ್ನು ಹಿಂಪಡೆಯುವಾಗ ಕಾಂಗ್ರೆಸ್ ಚರ್ಚೆ ಮಾಡಿತ್ತಾ? ಎಂದು ಪ್ರಶ್ನಿಸಿದರು.
ಈಗ ಚರ್ಚೆ ಆಗಬೇಕು ಎನ್ನುತ್ತಿರುವುದು ಕಾಂಗ್ರೆಸ್ ತುಷ್ಠೀಕರಣ ನೀತಿ ಆಗಿದೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೆಗಣಿ ಎತ್ತಿದ್ದೇನೆ ಅಂತಾ ಹೇಳುತ್ತಾರೆ. ಆದರೆ, ಸೆಗಣಿ ಎತ್ತಿದ್ದರಿಂದ ಏನೂ ಆಗುವುದಿಲ್ಲ. ಗೋವನ್ನು ಆರಾಧನೆ ಮಾಡಬೇಕು. ಸೆಗಣಿ ಎತ್ತಿ ನಾಟಕ ಮಾಡುವುದರಿಂದ ಪ್ರಯೋಜನ ಇಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಆದರೆ, ಗೋ ಹತ್ಯೆ ನಿಷೇಧವುರೈತರಿಗೆ ಪೂರಕವಾದ ಅಂಶವೇ ಆಗಿದೆ. ಕಾಂಗ್ರೆಸ್ ಗೋಹತ್ಯೆಕೋರರ ಪರವಾಗಿದೆ ಎಂದು ಆರೋಪಿಸಿದರು.