ಬೆಂಗಳೂರು: ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಶ್ರುತಿ (30) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಅವರ ಪತಿ, ಮಾವ–ಅತ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿಯಾದ ಸರ್ವೇಶ್, ಅವರ ತಂದೆ ಅಂಕೇಗೌಡ ಹಾಗೂ ತಾಯಿ ಅನುಸೂಯ ಬಂಧಿತರು. ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ನಿವೃತ್ತ ಎಸಿಪಿಯಾಗಿರುವ ಅಂಕೇಗೌಡ ಅವರ ಮಗ ಸರ್ವೇಶ್ ಹಾಗೂ ಶ್ರುತಿ ನಡುವೆ 2019ರಲ್ಲಿ ಮದುವೆ ಆಗಿತ್ತು. ಮೊದಲನೇ ಮದುವೆಯಾಗಿದ್ದ ಸರ್ವೇಶ್, ಅದನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದರು. ಈ ಸಂಬಂಧ ದಂಪತಿ ನಡುವೆ ಜಗಳ ಶುರುವಾಗಿತ್ತು’
‘ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಶ್ರುತಿ, ಎರಡನೇ ಬಾರಿ ಗರ್ಭ ಧರಿಸಿದ್ದರು. ಗಂಡು ಮಗು ಬೇಕೆಂದು ಪತಿ ಹಾಗೂ ಅತ್ತೆ–ಮಾವ ಕಿರುಕುಳ ನೀಡಲಾರಂಭಿಸಿದ್ದರು. ಅದರಿಂದ ನೊಂದು ಶ್ರುತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬದವರು ದೂರು ನೀಡಿದ್ದರು’ ಎಂದೂ ಪೊಲೀಸರು ವಿವರಿಸಿದರು.