ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಅವಕಾಶ ನಿರಾಕರಿಸಿದ ಸುಪ್ರೀಂ ಕೋರ್ಟ್

ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್‌ ನಿರ್ದೇಶನ
Last Updated 30 ಆಗಸ್ಟ್ 2022, 20:20 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನಿರಾಕರಿಸಿ ಸುಪ್ರೀಂಕೋರ್ಟ್‌ ಮಂಗಳವಾರ ಆದೇಶ ಹೊರಡಿಸಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದೆ.

ಕರ್ನಾಟಕ ವಕ್ಫ್‌ ಮಂಡಳಿ ಹಾಗೂ ಸೆಂಟ್ರಲ್‌ ಮುಸ್ಲಿಂ ಅಸೋಸಿಯೇಷನ್‌ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಅಭಯ್‌ ಎಸ್‌. ಓಕಾ ಹಾಗೂ ಎಂ.ಎಂ.ಸುಂದರೇಶ್ ಅವರನ್ನು ಒಳಗೊಂಡ ಪೀಠವು ಈ ಆದೇಶ ಹೊರಡಿಸಿತು.

ಕಳೆದ 200 ವರ್ಷಗಳಲ್ಲಿ ಈ ಮೈದಾನದಲ್ಲಿ ಇಂತಹ ಯಾವುದೇ ಉತ್ಸವವನ್ನು ಆಯೋಜಿಸಿರುವ ಉದಾಹರಣೆ ಇಲ್ಲ ಎಂಬುದನ್ನು ಪೀಠವು ಗಮನಿಸಿ,ಬೇರೆ ಕಡೆಗಳಲ್ಲಿ ಗಣೇಶೋತ್ಸವ ಆಚರಣೆ ಮಾಡುವಂತೆ ಸೂಚಿಸಿತು.

‘ಈದ್ಗಾ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಸ್ವೀಕರಿಸಿರುವ ಮನವಿ ಪತ್ರಗಳನ್ನು ಇದೇ 31ರಿಂದ ಸೀಮಿತ ಅವಧಿಗೆ ಪರಿಗಣಿಸಿ ಕರ್ನಾಟಕ ಸರ್ಕಾರ ಸೂಕ್ತ ಆದೇಶ ಹೊರಡಿಸಬಹುದು’ ಎಂದು ಹೈಕೋರ್ಟ್‌ನ ದ್ವಿಸದಸ್ಯ ಪೀಠ ಹೇಳಿತ್ತು. ಇದನ್ನು ಪ್ರಶ್ನಿಸಿ ವಕ್ಫ್‌ ಮಂಡಳಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

‘200 ವರ್ಷಗಳಿಂದ ಈ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡಿಲ್ಲ. ಇದನ್ನು ನೀವು ಸಹ ಒಪ್ಪಿಕೊಳ್ಳುತ್ತಿದ್ದೀರಿ. ಹಾಗಾದರೆ ಯಾಕೆಯಥಾಸ್ಥಿತಿಯನ್ನು ಕಾಯ್ದುಕೊಳ್ಳಬಾರದು’ ಎಂದು ಕರ್ನಾಟಕ ಸರ್ಕಾರ, ವಕ್ಫ್‌ ಮಂಡಳಿ ಹಾಗೂ ಇತರರಿಗೆ ಸುಪ್ರೀಂಕೋರ್ಟ್‌ ಪ್ರಶ್ನಿಸಿತು.

ಸುಮಾರು ಎರಡು ಗಂಟೆಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠವು, ‘ಈ ಪ್ರಕರಣದ ಬಗ್ಗೆ ಹೈಕೋರ್ಟ್‌ ಏಕಸದಸ್ಯ ಪೀಠ ಈಗಾಗಲೇ ಆದೇಶ ಹೊರಡಿಸಿದೆ. ಜಾಗದ ಮಾಲಿಕತ್ವಕ್ಕೆ ಸಂಬಂಧಿಸಿದಂತೆಕಕ್ಷಿದಾರರು ತಮ್ಮ ಅಹವಾಲುಗಳನ್ನು ಏಕಸದಸ್ಯ ಪೀಠದ ಮುಂದೆ ಸಲ್ಲಿಸಿ ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿ ಮೇಲ್ಮನವಿಯನ್ನು ವಿಲೇವಾರಿ ಮಾಡಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌,‘1871ರಿಂದಲೂ ಈ ಜಾಗ ಅರ್ಜಿದಾರರ ಸ್ವಾಧೀನದಲ್ಲಿದೆ. ಪ್ರತಿವಾದಿಗಳು ಈ ಜಾಗವನ್ನು ಪ್ರವೇಶಿಸದಂತೆ 1964ರಲ್ಲಿ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ. ತನ್ನ ಆಸ್ತಿಯನ್ನು ಬೇರೆಯವರು ಬಳಸುವುದಕ್ಕೆ ಅನುವು ಮಾಡಿಕೊಡುವಂತೆ ನ್ಯಾಯಾಲಯಗಳು ಬಲವಂತ ಮಾಡಲಾಗದು’ ಎಂದು ವಾದಿಸಿದರು.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಾರ್ಷಿಕೋತ್ಸವದ ಅಂಗವಾಗಿ ಈ ಮೈದಾನದಲ್ಲಿದ್ದ ಕಟ್ಟಡವನ್ನು ನೆಲಸಮಗೊಳಿಸುವುದಾಗಿ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ದಾಖಲಿಸಿರುವ ಸ್ವಯಂ‍ಪ್ರೇರಿತವಾಗಿ ಎಫ್‌ಐಆರ್‌ ಅನ್ನು ಉಲ್ಲೇಖಿಸಿದರು.

ಅರ್ಜಿದಾರರ ಪರವಾಗಿ ಹಾಜರಾದ ಮತ್ತೊಬ್ಬ ವಕೀಲದುಷ್ಯಂತ್‌ ದಾವೆ, ‘ದೇಶದ ಯಾವುದೇ ದೇಗುಲದ ಆವರಣದಲ್ಲಿ ನಮಾಜ್‌ ನಡೆಸಲು ಅವಕಾಶ ಕಲ್ಪಿಸುತ್ತಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದರು.

ಕರ್ನಾಟಕ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್‌ ರೋಹಟಗಿ, ‘ಅರ್ಜಿದಾರರಿಗೆ ವಿವಾದಿತ ಪ್ರದೇಶದ ಮಾಲಿಕತ್ವ ಅಥವಾ ಸಂಪೂರ್ಣ ಸ್ವಾಧೀನದ ಹಕ್ಕನ್ನು ನೀಡಲಾಗಿಲ್ಲ. ದೇಶದ ಇತರ ಭಾಗಗಳಲ್ಲಿ ದುರ್ಗಾ ಪೂಜೆ ಮತ್ತು ದಾಂಡಿಯಾಗೆ ಸ್ಥಳಾವಕಾಶ ಒದಗಿಸಿದಂತೆ, ಈ ಭೂಮಿಯಲ್ಲಿ ಕೂಡ ಗಣೇಶ ಚತುರ್ಥಿಗೆ ಅವಕಾಶ ಕಲ್ಪಿಸಬಹುದು’ ಎಂದು ವಾದಿಸಿದರು.

ಈ ವಿವಾದಿತ ಭೂಮಿಯಲ್ಲಿ ದಸರಾ, ಶಿವರಾತ್ರಿಯಂತಹ ಹಬ್ಬಗಳ ಆಚರಣೆಗೆ ಬಳಸುವ ಕುರಿತು ಎಲ್ಲ ರಾಜಕೀಯ ಪಕ್ಷಗಳು 2006ರಲ್ಲಿ ಮಾಡಿಕೊಂಡ ಒಪ್ಪಂದವನ್ನು ಕೂಡ ರೋಹಟಗಿ ಉಲ್ಲೇಖಿಸಿದರು.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ವಿವಾದಿತ ಪ್ರದೇಶದಲ್ಲಿ ಯಾವುದೇ ಶಾಶ್ವತ ಕಟ್ಟಡ ಸ್ಥಾಪಿಸುವುದಿಲ್ಲ ಎಂಬ ಭರವಸೆಯ ಮೇಲೆ ಎರಡು ದಿನಗಳ ಕಾಲ ಉತ್ಸವಕ್ಕೆ ಅವಕಾಶ ನೀಡಲು ಕರ್ನಾಟಕಸರ್ಕಾರ ಮುಂದಾಗಿತ್ತು’ ಎಂದರು.

ಆಗ ಮಧ್ಯಪ್ರವೇಶಿಸಿದ ದುಷ್ಯಂತ್‌ ದವೆ, ‘ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ (ಕಲ್ಯಾಣ್ ಸಿಂಗ್‌) ಈ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದರು ಹಾಗೂ ಬಳಿಕ ಬಾಬ್ರಿ ಮಸೀದಿಯನ್ನು ಕೆಡವಲಾಗಿತ್ತು’ ಎಂದರು.

ಕಪಿಲ್‌ ಸಿಬಲ್‌, ‘ಈ ಮೈದಾನದಲ್ಲಿ ಮಕ್ಕಳು ಆಟವಾಡಬಹುದು. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ನಡೆಸಬಹುದು. ಆದರೆ, ಬೇರೆ ಧರ್ಮದವರ ಸಮಾರಂಭಗಳಿಗೆ ಅನುವು ಮಾಡಿಕೊಟ್ಟರೆ ಸಮಸ್ಯೆ ಸೃಷ್ಟಿಯಾಗುತ್ತದೆ’ ಎಂದರು.

ಆರಾಧನಾ ಸ್ಥಳಗಳ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಒಂದು ಧರ್ಮಕ್ಕೆ ಸೇರಿದ ಜಾಗವನ್ನು ಬೇರೆ ಧರ್ಮದವರು ಬಳಸುವುದಕ್ಕೆ ನಿರ್ಬಂಧ ಇದೆ ಎಂದು ದವೆ ಉಲ್ಲೇಖಿಸಿದರು.

ಇದಕ್ಕೂ ಮುನ್ನ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠವು ಸಹಮತಕ್ಕೆ ಬರಲಿಲ್ಲ. ಈ ಪ್ರಕರಣವನ್ನುಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ಶಿಫಾರಸು ಮಾಡಿತು.ಬಳಿಕಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ಅವರು, ತ್ರಿಸದಸ್ಯ ಪೀಠ ರಚಿಸಿದ್ದರು.

*
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ಮಂಗಳವಾರ ವಜಾಗೊಳಿಸಿದೆ. ಪಾಲಿಕೆ ತೀರ್ಮಾನದಂತೆ, ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಿದೆ. ಪಾಲಿಕೆ ಆಯುಕ್ತರು ಅಧಿಕೃತವಾಗಿ ಅವರಿಗೆ ಅನುಮತಿ ನೀಡಲಿದ್ದಾರೆ.
-ಈರೇಶ ಅಂಚಟಗೇರಿ, ಮೇಯರ್, ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT