ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರದ ನಾಯಕತ್ವ | ಬಿಎಸ್‌ವೈ ಬೆನ್ನಿಗೆ ಮಠಾಧೀಶರು

ಮುರುಘಾ ಶರಣರು, ಪೇಜಾವರ ಶ್ರೀ, ಮಾದಾರ ಚೆನ್ನಯ್ಯ ಸ್ವಾಮೀಜಿ ಬೆಂಬಲ
Last Updated 20 ಜುಲೈ 2021, 19:29 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ನಾಡಿನ ವಿವಿಧ ಸಮುದಾಯಗಳ ಮಠಾಧೀಶರು ಆಗ್ರಹಿಸಿದ್ದು, ಇಲ್ಲಿಯವರೆಗೆ ರಾಜಕೀಯ ಮೇಲಾಟಗಳಿಗೆ ಸೀಮಿತವಾಗಿದ್ದ ಬಿಜೆಪಿ ಜಗಳಕ್ಕೆ ‘ಜಾತಿ–ಧರ್ಮ’ದ ಬಣ್ಣ ಬಂದಂತಾಗಿದೆ.

‘ಒಂದು ವೇಳೆ ಯಡಿಯೂರಪ್ಪ ಅವರನ್ನು ಪದಚ್ಯುತಿ ಗೊಳಿಸಿದರೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದೂ ಕೆಲವು ಸ್ವಾಮೀಜಿಗಳು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅವರು ಯಡಿಯೂರಪ್ಪ ಪರ ಹೇಳಿಕೆ ನೀಡಿದ ಬೆನ್ನಲ್ಲೇ ವೀರಶೈವ– ಲಿಂಗಾಯತ ಅಲ್ಲದೆ ಇತರ ಸಮುದಾಯದ ಮಠಾಧೀಶರೂ ಅವರ ಬೆಂಬಲಕ್ಕೆ ಧಾವಿಸಿದ್ದಾರೆ.

ಚಿತ್ರದುರ್ಗದ ಮುರುಘಾ ಶರಣರು, ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ,ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಬಾಲೆಹೊಸೂರು ದಿಂಗಾಲೇಶ್ವರ ಸ್ವಾಮೀಜಿ, ಯಡಿಯೂರಪ್ಪ ಪರ ಧ್ವನಿ ಎತ್ತಿರುವ ಮಠಾಧೀಶರಲ್ಲಿ ಪ್ರಮುಖ ರಾಗಿದ್ದಾರೆ. ದಿಂಗಾಲೇಶ್ವರ ಸ್ವಾಮಿಜಿ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸ್ವಾಮೀಜಿ ಗಳು ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲೇ ಮಂಗಳವಾರ ಭೇಟಿ ಮಾಡಿ ಮುಖ್ಯಮಂತ್ರಿ ಹುದ್ದೆಯಲ್ಲೇ ಮುಂದುವರಿಯುವಂತೆ ಒತ್ತಾಯಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತ ನಾಡಿದ ದಿಂಗಾಲೇಶ್ವರ ಸ್ವಾಮೀಜಿ, ‘ಯಡಿಯೂರಪ್ಪ ಅವರನ್ನು ಬದಲಿಸಿದರೆ ಬಿಜೆಪಿ ಸರ್ವನಾಶ ಆಗಲಿದೆ. ಬಿಜೆಪಿ ನಾಯಕರು ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇದು ಎಲ್ಲ ಮಠಾಧೀಶರ ಅಭಿಪ್ರಾಯ’ ಎಂದರು.

‘ತಮ್ಮ ಕೈಯಲ್ಲಿ ಏನೂ ಇಲ್ಲ. ಎಲ್ಲವೂ ವರಿಷ್ಠರ ನಿರ್ಧಾರ ಎಂದು ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿ ವರಿಷ್ಠರ ತೀರ್ಮಾನ ನಾವು ಒಪ್ಪುವು ದಿಲ್ಲ. ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು. ಎರಡು– ಮೂರು ದಿನಗಳಲ್ಲಿ ಬೆಂಗಳೂರಿನಲ್ಲಿ 500 ಮಠಾಧೀಶರು ಸಭೆ ಸೇರಿ ಈ ಬಗ್ಗೆ ಒಕ್ಕೊರಲಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಅವರು ಹೇಳಿದರು.

ಬದಲಾವಣೆ ಸೂಕ್ತವಲ್ಲ– ಪೇಜಾವರ ಶ್ರೀಗಳು

‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕಾಲ ಸೂಕ್ತವಾಗಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿಯಲ್ಲಿ ಹೇಳಿದ್ದಾರೆ.

‘ಯಡಿಯೂರಪ್ಪನವರು ನಾಯಕತ್ವ ಚೆನ್ನಾಗಿ ನಿಭಾಯಿಸಿದ್ದಾರೆ. ಕೋವಿಡ್ ಸಂದರ್ಭವನ್ನು ಸಮರ್ಥವಾಗಿ ಎದುರಿಸಿದ್ದಾರೆ. ನಾಯಕತ್ವ ಬದಲಾವಣೆ ಸಂಬಂಧ ಬಿಜೆಪಿಯಲ್ಲಿ ಯಾವ ಚರ್ಚೆಗಳು ನಡೆದಿವೆ ಎಂಬ ಮಾಹಿತಿ ಇಲ್ಲ. ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ರೀತಿ ಹಾಗೂ ಅವರ ನಡೆ ಗಮನಿಸಿ ವೈಯಕ್ತಿಕ ಅಭಿಪ್ರಾಯ ಹೇಳಿದ್ದೇನೆ’ ಎಂದಿದ್ದಾರೆ.

ಶೋಷಿತ ಸಮುದಾಯ ಮೇಲೆತ್ತಿದರು

‘ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಬಿಜೆಪಿ ಯನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಅವರು ಅಧಿಕಾರಕ್ಕೆ ಬಂದ ನಂತರ ಎಲ್ಲ ಶೋಷಿತ ಸಮುದಾ ಯದ ಮಠಗಳನ್ನು ಮೇಲೆತ್ತಿದರು. ಅವರು ಮುಖ್ಯಮಂತ್ರಿಯಾದಾಗಲೆಲ್ಲ ಸುಗಮ ಆಡಳಿತ ನಡೆಸಲು ಬಿಡುತ್ತಿಲ್ಲ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಇದು ಪುನರಾವರ್ತನೆ ಆಗುತ್ತಿರುವುದು ಸರಿಯಲ್ಲ’ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಅತಿವೃಷ್ಟಿ, ಅನಾವೃಷ್ಟಿ ಜತೆಯಲ್ಲೇ ಬಂದ ಕೋವಿಡ್ ಸಂಕಷ್ಟವನ್ನು ಸಮರ್ಥ ವಾಗಿ ನಿಭಾಯಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೂ ಶ್ರಮಿಸುತ್ತಿದ್ದಾರೆ. ಅವಧಿ ಮುಗಿಯುವವರೆಗೂ ಅವರಿಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ಕೆಳಗಿಳಿಸಿದರೆ ಸರ್ಕಾರ ಪತನ

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಮತ್ತೆ ಇತಿಹಾಸ ಮರುಕಳಿಸಲಿದೆ. ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ’ ಎಂದು ಬೀದರ್‌ ಜಿಲ್ಲೆ ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಎಚ್ಚರಿಕೆ ನೀಡಿದ್ದಾರೆ.

‘ನಾಯಕತ್ವ ಬದಲಾವಣೆ ಅಪ್ರಸ್ತುತ. ಯಡಿಯೂರಪ್ಪ ಅವರನ್ನು ಕಡೆಗಣಿಸಿ ದರೆ ಪಕ್ಷಕ್ಕೆ ದೊಡ್ಡ ನಷ್ಟವಾಗಲಿದೆ. ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಸರಿಯಲಿದೆ. ಅವಧಿ ಮುಗಿಯುವ ವರೆಗೂ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಜನ ಬೆಂಬಲದ ಜತೆಗೆ ಪಕ್ಷಾತೀತವಾಗಿ ಅನೇಕ ನಾಯಕರ ಬೆಂಬಲವೂ ಅವರಿಗೆ ಇದೆ. ಆದರೂ ಸ್ವಪಕ್ಷದ ಕೆಲ ನಾಯಕರು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ನಡೆಸಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

‘ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ಹೊರಟರೆ ಮೂರು ಸಾವಿರಕ್ಕೂ ಹೆಚ್ಚು ಮಠಗಳು ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿವೆ’ ಎಂದು ಬೆಳ್ಳಾವಿ ಮಠದ ಮಹಂತಲಿಂಗೇಶ್ವರ ಸ್ವಾಮೀಜಿ ಕಿಡಿಕಾರಿದ್ದಾರೆ.

‘ನಾಯಕತ್ವ ಬದಲಿಸಿದರೆ ಸಾಮೂಹಿಕ ಹೋರಾಟ’

ಚಿತ್ರದುರ್ಗ: ‘ಬಿ.ಎಸ್‌.ಯಡಿಯೂರಪ್ಪ ಅವರನ್ನು ಯಾವ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದು. ಅವಧಿ ಪೂರ್ಣಗೊಳ್ಳುವವರೆಗೂ ಅವರನ್ನೇ ಮುಂದುವರಿಸಬೇಕು. ಒಂದು ವೇಳೆ ನಾಯಕತ್ವ ಬದಲಾಯಿಸಿದರೆ ಸಾಮೂಹಿಕ ಹೋರಾಟಕ್ಕೂ ಸಿದ್ಧರಿದ್ದೇವೆ’ ಎಂದು ವಿವಿಧ ಮಠಾಧೀಶರು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದರು.

ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಇಲ್ಲಿನ ಮುರುಘಾಮಠದಲ್ಲಿ ಹಲವು ಮಠಾಧೀಶರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದರು. ‘ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಯಡಿಯೂರಪ್ಪ ಅವರಿಗೇನೂ ನಷ್ಟ ಆಗುವುದಿಲ್ಲ. ಆದರೆ, ಪಕ್ಷಕ್ಕೆ ದೊಡ್ಡ ತೊಂದರೆ ಉಂಟಾಗಬಹುದು. ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದವರನ್ನು ನಿರ್ಲಕ್ಷಿಸುವುದರಿಂದ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ. ಅವಧಿಗೂ ಮುನ್ನವೇ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಪಕ್ಷಕ್ಕೆ ತೊಂದರೆ ಆಗುವುದು ಖಚಿತ’ ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

‘ಯಡಿಯೂರಪ್ಪ ಅವರೊಬ್ಬ ಜನನಾಯಕ. ರಾಜಕೀಯ ಜೀವನವನ್ನು ಏಕವ್ಯಕ್ತಿಯಿಂದ ಆರಂಭಿಸಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಥ ಮೇಧಾವಿ ಹಾಗೂ ಮುತ್ಸದ್ಧಿಯನ್ನು ಅಲಕ್ಷ್ಯ ಮಾಡುವುದು ಸರಿಯಲ್ಲ. ಅವರ ಗೌರವಕ್ಕೆ ಧಕ್ಕೆ ಉಂಟಾಗುವಂತಹ ನಡೆಯನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ ಮಾತನಾಡಿ, ‘ಯಡಿಯೂರಪ್ಪ ಕೇವಲ ವೀರಶೈವ–ಲಿಂಗಾಯತ ಸಮುದಾಯಕ್ಕೆ ಮಾತ್ರವಲ್ಲ; ಬಸವಣ್ಣ ಅವರ ಕಾಯಕ ಪ್ರಜ್ಞೆಗೆ ಸಾಕ್ಷಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವಾ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕು. ಪರ್ಯಾಯ ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ಯಾವ ವಿರೋಧವೂ ಇಲ್ಲ. ಆದರೆ, ಯಡಿಯೂರಪ್ಪ ಬದಲಾವಣೆ ಸಲ್ಲದು’ ಎಂದರು.

ಇಳಕಲ್‌ನ ಗುರುಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸತ್ತಿಮಠದ ಸ್ವಾಮೀಜಿ, ಚಳ್ಳಕೆರೆಯ ಬಸವಕಿರಣ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ ಇದ್ದರು.

ಅಪಾಯ ಕಟ್ಟಿಟ್ಟ ಬುತ್ತಿ: ಶ್ರೀಶೈಲ ಸ್ವಾಮೀಜಿ

ದಾವಣಗೆರೆ: ‘ರಾಜ್ಯದ ಜನಾಭಿಮತ ಯಡಿಯೂರಪ್ಪ ಅವರ ಪರ ಇದ್ದು, ಚುನಾವಣೆಗಳಲ್ಲಿ ಅವರನ್ನು ಬೆಂಬಲಿಸಿದ್ದಾರೆ. ವರಿಷ್ಠರು ಅವರನ್ನು ಚೆನ್ನಾಗಿ ನಡೆಸಿಕೊಳ್ಳಬೇಕು. ಅವರು ಹಿಂದೆ ಸರಿದರೆ ಅಥವಾ ಸರಿಸುವ ಪ್ರಕ್ರಿಯೆ ಆದರೆ ಪಕ್ಷಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ’ ಎಂದು ಶ್ರೀಶೈಲ ಮಠದ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ‌ ಎಚ್ಚರಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎಲ್ಲಾ ಜನಾಂಗದವರಿಗೆ ನ್ಯಾಯ ದೊರಕಿಸಿಕೊಟ್ಟಿರುವ ಕೀರ್ತಿ ಯಡಿಯೂರಪ್ಪ ಅವರಿಗಿದ್ದು, ಅವರಿಗೆ ಏನೇ ಆದರೂ ಎಲ್ಲಾ ಜನಾಂಗದವರೂ ಅವರ ಪರವಾಗಿ ನಿಲ್ಲುತ್ತಾರೆ. ಬೇರೆ ಪಕ್ಷದ ಶಾಮನೂರು ಶಿವಶಂಕರಪ್ಪ ಅವರೂ ಬೆಂಬಲ ಸೂಚಿಸಿದ್ದಾರೆ. ಬಿಎಸ್‌ವೈ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರು. ಜನರೂ ಅವರನ್ನು ಪ್ರಶ್ನಾತೀತ ನಾಯಕ ಎಂಬ ವಿಶ್ವಾಸದಲ್ಲಿ ಬೆಂಬಲಿಸಿದ್ದಾರೆ’ ಎಂದು ಹೇಳಿದರು.

ವೀರಶೈವ ಮಹಾಸಭೆ, ಪಂಚಪೀಠಗಳು ಕೂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ನಿಲ್ಲಲಿದ್ದು, ಶ್ರೀಶೈಲ ಮಠವೂ ಅವರ ಬೆನ್ನಿಗೆ ಇದೆ ಎಂದು ಹೇಳಿದರು.

‘ರಾಜ್ಯದ ಬೆಳವಣಿಗೆಗಳ ಬಗ್ಗೆ ಸಮಾನ ಪೀಠಾಧ್ಯಕ್ಷರ ಜೊತೆ ಮಾತುಕತೆ ನಡೆಸುತ್ತೇವೆ. ಬಿ.ಎಸ್.ವೈ ಮುಂದುವರಿದರೆ ಪಕ್ಷಕ್ಕೆ ರಾಜ್ಯಕ್ಕೆ ಒಳ್ಳೆಯದು. ಬುಧವಾರ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡುತ್ತೇನೆ’ ಎಂದು ಹೇಳಿದರು.

***

ಕಾಂಗ್ರೆಸ್‌ನ ಲಿಂಗಾಯತ ನಾಯಕರು ದಿವಾಳಿಯಾಗಿದ್ದಾರೆ, ಅವರಿಗೆ ನಯಾಪೈಸೆ ಕಿಮ್ಮತ್ತಿಲ್ಲ. ಸಚಿವರಾಗಲು ಸೋನಿಯಾ– ರಾಹುಲ್ ಕಾಲು ಹಿಡಿಯುವ ಅವರಿಗೆ ತಾಕತ್ತಿದ್ದರೆ ಲಿಂಗಾಯತರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ

ಬಸನಗೌಡ ಪಾಟೀಲ ಯತ್ನಾಳ,ಶಾಸಕ

***

ಮೇಲ್ವರ್ಗದವರ ಪಕ್ಷ ಎಂಬ ಮಾತನ್ನು ಹುಸಿಯಾಗಿಸಿ, ಸರ್ವ ಧರ್ಮೀಯರನ್ನು ಒಟ್ಟಿಗೆ ಒಯ್ಯಲು ಯಡಿಯೂರಪ್ಪ ಶ್ರಮಿಸುತ್ತಿದ್ದಾರೆ. ಪಕ್ಷಕ್ಕಾಗಿ ನಾಲ್ಕು ದಶಕ ಹೋರಾಟ ಮಾಡಿದ್ದಾರೆ

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಭೋವಿ ಗುರುಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT