ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ ಹಿಂಪಡೆದ ದೇವನೂರು: ಸರ್ಕಾರ ಮಧ್ಯಪ್ರವೇಶಿಸಬೇಕು– ನಾರಾಯಣಗೌಡ ಒತ್ತಾಯ

Last Updated 24 ಮೇ 2022, 15:11 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ, ಕನ್ನಡದ ಕೀರ್ತಿ ಶಿಖರಗಳಲ್ಲಿ ಒಬ್ಬರಾದ ಮೇರು ಸಾಹಿತಿ ದೇವನೂರು ಮಹಾದೇವ ಅವರು ಹತ್ತನೇ ತರಗತಿಯ ಪಠ್ಯಕ್ಕೆ ನೀಡಿದ್ದ 'ಎದೆಗೆ ಬಿದ್ದ ಅಕ್ಷರ' ಲೇಖನ ಹಿಂದಕ್ಕೆ ಪಡೆದಿರುವುದನ್ನು ಕೇಳಿ ಆಘಾತವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕ್ಷಣಕಾಲವೂ ತಡಮಾಡದೆ ಮಧ್ಯೆ ಪ್ರವೇಶಿಸಿ ಬಿಕ್ಕಟ್ಟನ್ನು‌ ಬಗೆಹರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದ್ದಾರೆ.

ತಮ್ಠ ಲೇಖನವನ್ನು ಹಿಂದಕ್ಕೆ ಪಡೆದ ಘಟನೆ ಕರ್ನಾಟಕದ ಇತಿಹಾಸದಲ್ಲಿ ಮೊದಲಬಾರಿ ಘಟಿಸಿದೆ. ಕರ್ನಾಟಕ ಸರ್ಕಾರಕ್ಕೆ ಇದು ಶೋಭೆ ತರುವ ವಿಷಯವಲ್ಲ‌. ಇಂಥ ನಿರ್ಧಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ದೇವನೂರು ಅವರು ಅನುಭವಿಸಿರುವ ಮಾನಸಿಕ ಯಾತನೆಯನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ಇದು ನಾಡಿನ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಪಠ್ಯಪುಸ್ತಕ ಪುನರ್ ಪರಿಶೀಲನೆಗಾಗಿ ಸಮಿತಿ ನೇಮಕ ಮಾಡಿದಾಗಲೇ ಸರ್ಕಾರ ಎಡವಿದೆ. ಸಮಿತಿಗೆ ನೇಮಕ ಮಾಡಲು ಬಲಪಂಥೀಯ ವಿದ್ವಾಂಸರು, ಶಿಕ್ಷಣ ತಜ್ಞರೇ ಬೇಕು ಎಂದಿದ್ದರೆ ಹಲವಾರು ಮಂದಿ ಸಜ್ಜನರು, ಎದೆಯಲ್ಲಿ ನಂಜು ಇಟ್ಟುಕೊಳ್ಳದೆ ಕಾರ್ಯ ನಿರ್ವಹಿಸುವವರು ಲಭ್ಯವಿದ್ದರು. ಆದರೆ ಸರ್ಕಾರ ಇಂಥವರನ್ನು ನೇಮಕ ಮಾಡದೆ ತಪ್ಪೆಸಗಿದೆ ಎಂದು ಟೀಕಿಸಿದ್ದಾರೆ.

ಶಿಕ್ಷಣ ತಜ್ಞನಲ್ಲದ, ಕನ್ನಡ ಸಾಹಿತಿಗಳ ಕುರಿತು ಅಗೌರವ ಹೊಂದಿರುವ, ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ ಲೇಖನ ಬರೆದ, ನಾಡಗೀತೆಯನ್ನು ಅತ್ಯಂತ‌ ಕೊಳಕಾಗಿ ಪರಿಷ್ಕರಿಸಿ ಬರೆದ, ಕನ್ನಡಿಗರ ಅಸ್ಮಿತೆಯ ಪ್ರತೀಕವಾದ ಕನ್ನಡ ಧ್ವಜವನ್ನು ತನ್ನ ಒಳಚೆಡ್ಡಿಗೆ ಹೋಲಿಸಿದ ವ್ಯಕ್ತಿಯನ್ನು ಪಠ್ಯ ಪುಸ್ತಕ ಸಮಿತಿಗೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದೇ ಮೊದಲ ತಪ್ಪು ಎಂದು ಕಿಡಿ ಕಾರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕನ್ನಡದ್ರೋಹದ ಕೆಲಸವನ್ನೇ ಮಾಡಿಕೊಂಡು ಬಂದ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಶೀಲನೆಗೆ ಬಿಟ್ಟರೆ ಏನಾಗಬಹುದು ಎಂಬುದನ್ನು ಇಂದು ನಾವು ನೋಡುತ್ತಿದ್ದೇವೆ. ಕನ್ನಡದ ಸಾರಸ್ವತ ಲೋಕ ಎದ್ದು ನಿಂತು ಪ್ರತಿಭಟಿಸುತ್ತಿದೆ. ಮಕ್ಕಳ ಪಠ್ಯದಲ್ಲಿ ನಂಜು ತುಂಬುವ ಇಂಥವರ ವಿರುದ್ಧ ಶೈಕ್ಷಣಿಕ, ಬುದ್ಧಿಜೀವಿ ವಲಯ ಧ್ವನಿ ಎತ್ತಿದೆ. ಸರ್ಕಾರ ಕೂಡಲೇ ಪರಿಷ್ಕರಣಾ ಸಮಿತಿಯ ಎಲ್ಲ ಪರಿಷ್ಕರಣೆಯನ್ನೂ ತಿರಸ್ಕರಿಸಬೇಕು. ಈಗಾಗಲೇ ಮುದ್ರಿಸಿರುವ ಹಳೆಯ ಪಠ್ಯಪುಸ್ತಕಗಳನ್ನೇ ಶಾಲೆಗಳಿಗೆ ನೀಡಬೇಕು. ಶಾಲೆಗಳು ಈಗಾಗಲೇ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಕೂಡಲೇ ಹಳೆಯ ಪಠ್ಯ ಪುಸ್ತಕಗಳನ್ನೇ ಒದಗಿಸಬೇಕು. ಇಷ್ಟೆಲ್ಲ ಅವಾಂತರಕ್ಕೆ ಕಾರಣವಾದ ಸಮಿತಿಯನ್ನು ಈ ಕೂಡಲೇ ವಿಸರ್ಜಿಸಬೇಕು ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರರು ಸಾಮಾಜಿಕ, ಸಾಂಸ್ಕೃತಿಕ ವಿಷಯಗಳಲ್ಲಿ ಎಚ್ಚರ‌ ಮತ್ತು ಪ್ರಜ್ಞೆ ಉಳ್ಳವರು. ಅವರು ಯಾವುದೇ ರೀತಿಯ ಬಾಹ್ಯ ಒತ್ತಡಕ್ಕೆ ಒಳಗಾಗದೆ ನಾಯಕತ್ವದ ಗುಣವನ್ನು ಪ್ರದರ್ಶಿಸಬೇಕು. ಕೂಡಲೇ ಮಧ್ಯಪ್ರವೇಶಿಸಿ ವಿವಾದವನ್ನು‌ ಬಗೆಹರಿಸಬೇಕು ಎಂದು ಮನವಿ ಮಾಡುತ್ತೇನೆ.

ದೇವನೂರು ಮಹದೇವ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಕನ್ನಡದ ಹಿರಿಯ ಸಾಹಿತಿಗಳು ಕನ್ನಡದ ಆಸ್ತಿ, ಕನ್ನಡತನದ ಪ್ರತೀಕ, ಕನ್ನಡಿಗರ ಹೆಮ್ಮೆ. ಅವರಿಗೆ ಅಪಚಾರ, ಅಪಮಾನ ಎಸಗುವ ಯಾವ ಕೆಲಸವನ್ನೂ ಯಾರೂ ಮಾಡಬಾರದು. ಕರ್ನಾಟಕ ರಕ್ಷಣಾ‌ ವೇದಿಕೆ ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT