ಕಲಬುರ್ಗಿ: ಇಲ್ಲಿನ ಪೊಲೀಸ್ ತರಬೇತಿ ಕಾಲೇಜಿನಿಂದ ತರಬೇತಿ ಪೂರ್ಣಗೊಳಿಸಿರುವ 108 ಪಿಎಸ್ಐ ಮತ್ತು ಆರ್ಎಸ್ಐ ಪೈಕಿ 28 ಮಂದಿ ಸಾಫ್ಟ್ವೇರ್ ಎಂಜಿನಿಯರ್ಗಳಿದ್ದಾರೆ!
ಪಿಎಸ್ಐ (ಗುಪ್ತವಾರ್ತೆ), ಪಿಎಸ್ಐ (ವೈರ್ಲೆಸ್) ಹಾಗೂ ವಿಶೇಷ ಆರ್ಎಸ್ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಸೋಮವಾರ ನಡೆಯಿತು.33 ಮಂದಿ ಬಿ.ಎ, 18 ಬಿ.ಎಸ್ಸಿ, 14 ಮಂದಿ ಬಿ.ಕಾಂ ಹಾಗೂ ಇತರ ಶಿಕ್ಷಣ ಪಡೆದವರೂ ಇದ್ದರು.
ಎರಡು–ಮೂರು ವರ್ಷ ಎಂಜಿನಿಯರ್ ವೃತ್ತಿ ಮಾಡಿದವರೂ ಅದನ್ನು ಬಿಟ್ಟು ಖಾಕಿ ಸಮವಸ್ತ್ರ ಧರಿಸಿದ್ದಾರೆ. ನೇಮಕಾತಿಯಾದ ಟೆಕಿಗಳಲ್ಲಿ ಮೂವರು ಟಾಪರ್ಗಳಾಗಿ ವಿವಿಧ ಪ್ರಶಸ್ತಿಗಳನ್ನೂ ಗೆದ್ದುಕೊಂಡರು.
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ಪದವೀಧರೆ, ಬೆಂಗಳೂರಿನ ಕೆಂಪಾಪುರದ ಎಸ್.ಚೈತ್ರ ಅವರು ರಾಜ್ಯ ಗುಪ್ತವಾರ್ತೆ ವಿಭಾಗದ ಪಿಎಸ್ಐ ಆಗಿ ನೇಮಕಗೊಂಡಿದ್ದು, ಅವರ ತಂದೆ ಶ್ರೀಧರ್ ಕೂಡ ಎಎಸ್ಐ ಆಗಿದ್ದಾರೆ.
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದ ಶಿವಮೊಗ್ಗದ ಹಾರನಹಳ್ಳಿಯ ಸೈಯದಾ ಹೈರ್ಮನ್ ಸರ್ವರಿ ಅವರು ತುಮಕೂರು ಪೊಲೀಸ್ ನಿಯಂತ್ರಣ ಕೊಠಡಿಗೆ ಪಿಎಸ್ಐ ಆಗಿ ನಿಯೋಜನೆಗೊಂಡಿದ್ದಾರೆ. ಚೈತ್ರಾ ಹಾಗೂ ಸೈಯದಾ ಒಳಾಂಗಣ ವಿಭಾಗದಲ್ಲಿ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದರು. ಕಂಪ್ಯೂಟರ್ ಸೈನ್ಸ್ ಪದವೀಧರರಾದ ಬಾಗಲಕೋಟೆ ಜಿಲ್ಲೆಯ ಚಿಮ್ಮಡ ಗ್ರಾಮದ ಮಹಾಲಿಂಗ ಗಂಗಪ್ಪ ತೇಲಿ ಅವರು ಬೆಳಗಾವಿ ಜಿಲ್ಲಾ ನಿಯಂತ್ರಣ ಕೇಂದ್ರದ ಪಿಎಸ್ಐ ಆಗಿದ್ದಾರೆ. ಕೃಷಿ ಕುಟುಂಬದಿಂದ ಬಂದ ಇವರು, ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಎರಡು ವರ್ಷ ಕೆಲಸ ಮಾಡಿದ್ದಾರೆ. ತರಬೇತಿಯಲ್ಲಿ ಸರ್ವಾಂಗೀಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಆಗಿ ಹೊರಹೊಮ್ಮಿದ್ದಾರೆ.