ಪಾವಗಡ: ತಾಲ್ಲೂಕಿನ ಮಾಚರಾಜನಹಳ್ಳಿಯಲ್ಲಿ ಆಂಜನೇಯಸ್ವಾಮಿ ದೇಗುಲದ ಪ್ರವೇಶಕ್ಕೆ ಪರಿಶಿಷ್ಟ ಸಮುದಾಯದವರನ್ನು ತಡೆಯಲಾಗಿದೆ ಎಂದು ಕೆಲ ಗ್ರಾಮಸ್ಥರು ಶನಿವಾರ ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆಶಾಸಕ ವೆಂಕಟರಮಣಪ್ಪ, ತಹಶೀಲ್ದಾರ್, ಕಾರ್ಯ ನಿರ್ವಹಣಾಧಿಕಾರಿ, ಇತರೆ ಅಧಿಕಾರಿಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಮೆರವಣಿಗೆ ಮೂಲಕ ದೇಗುಲಕ್ಕೆ ಕರೆದೊಯ್ಯಲಾಯಿತು.
ಇದೇ ವೇಳೆ ಕೆಲ ಪರಿಶಿಷ್ಟ ಸಮುದಾಯದ ಮಹಿಳೆಯರು ದೇಗುಲ ಪ್ರವೇಶಿಸದೆ ದೇಗುಲದ ಹೊರಗಡೆ ನಿಂತಿದ್ದರು. ಇದನ್ನು ಗಮನಿಸಿದ ಕೆಲವರು ದೇಗುಲದ ಹೊರ ಭಾಗ ನಿಂತಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಈ ಬಗ್ಗೆ ಅಧಿಕಾರಿಗಳು ಗ್ರಾಮಸ್ಥರನ್ನು ವಿಚಾರಿಸಿದಾಗ ಯಾರೂ ದೇಗುಲ ಪ್ರವೇಶಿಸುವುದನ್ನು ತಡೆದಿಲ್ಲ. ಮಹಿಳೆಯರೇ ದೇಗುಲದ ಒಳಗೆ ಹೋಗಿಲ್ಲ ಎಂದು ತಿಳಿಸಿದರು.