ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಸ್ವಪಕ್ಷದ ಸದಸ್ಯೆ ತಳ್ಳಾಡಿದ ಬಿಜೆಪಿ ಶಾಸಕ?

ಮಹಾಲಿಂಗಪುರ ಪುರಸಭೆ: ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಚುನಾವಣೆ ವೇಳೆ ಘಟನೆ
Last Updated 11 ನವೆಂಬರ್ 2020, 8:24 IST
ಅಕ್ಷರ ಗಾತ್ರ

ಬಾಗಲಕೋಟೆ: ಪುರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ವೇಳೆ ಮತದಾನ ಮಾಡಲು ಬಂದ ತಮ್ಮದೇ ಪಕ್ಷದ ಸದಸ್ಯೆಯನ್ನು ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಅಡ್ಡಗಟ್ಟಿ ಆಕೆಯನ್ನು ಹಿಡಿದು–ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಸಿದ್ದು ಸವದಿ ಪ್ರತಿನಿಧಿಸುವ ತೇರದಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ನವೆಂಬರ್ 9ರಂದು ಚುನಾವಣೆ ನಡೆದಿತ್ತು. 23 ಸದಸ್ಯರ ಬಲದ ಪುರಸಭೆಗೆ 13 ಬಿಜೆಪಿ ಹಾಗೂ 10 ಮಂದಿ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದಾರೆ. ಬಹುಮತ ಇದ್ದರೂ ಬಿಜೆಪಿಯಲ್ಲಿ ಅಧ್ಯಕ್ಷ–ಉಪಾಧ್ಯಕ್ಷ ಅಭ್ಯರ್ಥಿಗಳ ವಿಚಾರದಲ್ಲಿ ಅಸಮಾಧಾನವಿತ್ತು. ಹೀಗಾಗಿ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ನ 10 ಸದಸ್ಯರು ಹಾಗೂ ಬಿಜೆಪಿಯ ಮೂವರು ಒಂದಾಗಿ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ.

ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಗಳ ವಿರುದ್ಧ ತಮ್ಮ ಪಕ್ಷದ ಮೂವರು ಸದಸ್ಯರು ಅಡ್ಡಮತದಾನ ಮಾಡಬಹುದು ಎಂಬ ಗುಮಾನಿಯ ಮೇಲೆ ಅವರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ತಡೆಯುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮತದಾನ ಮಾಡಲು ಹೊರಟ ವಾರ್ಡ್ ನಂ 4ರ ಸದಸ್ಯೆ ಚಾಂದಿನಿ ನಾಯ್ಕ ಅವರನ್ನುಪುರಸಭೆ ಕಚೇರಿ ಎದುರು ನೆರೆದಿದ್ದ ಬಿಜೆಪಿ ಬೆಂಬಲಿಗರು ತಡೆಯಲು ಮುಂದಾಗಿದ್ದಾರೆ. ಚಾಂದಿನಿ ಅವರನ್ನು ಅಡ್ಡಗಟ್ಟಿ ವಾಪಸ್ ಹೋಗುವಂತೆ ತಳ್ಳಾಡಿದ್ದಾರೆ. ಗುಂಪಿನ ನಡುವೆ ಸಿಲುಕಿ ಒದ್ದಾಡುವ ಆಕೆ ರಕ್ಷಣೆಗಾಗಿ ಕೂಗಿಕೊಳ್ಳುತ್ತಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಸದಸ್ಯೆಯನ್ನು ಒಳಗೆ ಕರೆದೊಯ್ಯಲು ಮುಂದಾಗಿದ್ದು, ಬಾಗಿಲಿನಲ್ಲಿ ಎದುರಾಗುವ ಶಾಸಕ ಸಿದ್ದು ಸವದಿ ಸದಸ್ಯೆಯ ತಡೆಯುತ್ತಾರೆ. ಆಗ ತಳ್ಳಾಟ ನಡೆದು ಚಾಂದಿನಿ ಮೆಟ್ಟಿಲಿನಿಂದ ಉರುಳಿ ಬೀಳುತ್ತಾರೆ. ಆಕೆಯನ್ನು ಎತ್ತಿದ ಪೊಲೀಸರು ರಕ್ಷಣೆಯಲ್ಲಿ ಒಳಗೆ ಕರೆದೊಯ್ಯುತ್ತಾರೆ. ಆಗಲೂ ನೂಕಾಟ–ತಳ್ಳಾಟ ನಡೆಯುವ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ’ಪ್ರಜಾವಾಣಿ‘ ಚಾಂದಿನಿ ನಾಯಕ ಅವರನ್ನು ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT