ಬೆಳಗಾವಿ: ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಗಡಿ ಭಾಗದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ.
ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಲವು ಬಸ್ಗಳಿಗೆ ಯುವಕರು ಶುಕ್ರವಾರ ಕಪ್ಪು ಮಸಿ ಬಳಿದಿದ್ದಾರೆ. ಬಸ್ಗಳ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಬರೆದು, ಕೇಸರಿ ಧ್ವಜಗಳನ್ನು ಬಸ್ಗಳಿಗೆ ಕಟ್ಟಿ ಕರ್ನಾಟಕ ವಿರುದ್ಧ ಘೋಷಣೆ ಮೊಳಗಿಸಿದ್ದಾರೆ.
ಕೊಲ್ಹಾಪುರ, ಪುಣೆ, ಔರಂಗಾಬಾದ್ ಸೇರಿದಂತೆ ವಿವಿಧೆಡೆ ರಾಜ್ಯದ ಬಸ್ಗಳನ್ನು ತಡೆದ ಶಿವಸೇನೆ, ಅಖಿಲ ಮಹಾರಾಷ್ಟ್ರ ಮಹಾಸಂಘದ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕದ ಬಸ್ಗಳು ಮಹಾರಾಷ್ಟ್ರ ಪ್ರವೇಶ ನಿಲ್ಲಿಸುವಂತೆ ಘೋಷಣೆ ಕೂಗಿದ್ದಾರೆ.
ಕೊಲ್ಹಾಪುರದಲ್ಲಿ ಶಿವಸೇನೆಯ ಜಿಲ್ಲಾ ಘಟಕದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿದ್ದಾರೆ. ರಸ್ತೆ ಮಧ್ಯೆ ಪ್ರತಿಕೃತಿ ದಹನ ಮಾಡಿ, ಧಿಕ್ಕಾರ ಕೂಗಿದ್ದಾರೆ.
‘ಜತ್ತ, ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕದ ಪ್ರದೇಶ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಕಳ್ಳನೇ ತಿರುಗಿ ಬೊಬ್ಬೆ ಹೊಡೆದ ರೀತಿಯಲ್ಲಿ ಅವರು ಮಾತನಾಡಿದ್ದಾರೆ’ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ದೇವಣೆ ಆಕ್ರೋಶ ಹೊರಹಾಕಿದ್ದಾರೆ.
ಇದೇ ವಿಚಾರವಾಗಿ ಪ್ರತಿ ಹೇಳಿಕೆ ನೀಡಿದ ಜತ್ತ ತಾಲ್ಲೂಕಿನ ಕೆಲವು ಕನ್ನಡಿಗರು, ‘ಜತ್ತ ತಾಲ್ಲೂಕಿನ 44 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕೆಂದು ಹೇಳಿದ್ದು ನಮಗೆ ಹರ್ಷ ತಂದಿದೆ. ಕರ್ನಾಟಕದ ಮುಖ್ಯಮಂತ್ರಿಗೆ ಧನ್ಯವಾದ’ ಎಂಬ ಹೇಳಿಕೆಯ ವಿಡಿಯೊ ಹರಿಬಿಟ್ಟಿದ್ದಾರೆ.