ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನ ನಡುವೆಯೂ ರಾಜ್ಯ ಸರ್ಕಾರವು ಆರೋಗ್ಯ ಮೂಲಕ ಸೌಕರ್ಯವನ್ನು ವೃದ್ಧಿಸಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಾಜ್ಯದಲ್ಲಿ ದಿನಕ್ಕೆ 2 ಲಕ್ಷ ಕೋವಿಡ್ ಪರೀಕ್ಷೆ ನಡೆಸುವ ಸಾಮರ್ಥ್ಯ, 1015 ಮೆಟ್ರಿಕ್ ಟನ್ ಆಕ್ಸಿಜನ್ ಲಭ್ಯತೆ, 22 ಸಾವಿರಕ್ಕೂ ಅಧಿಕ ಆಕ್ಸಿಜನ್ ಹಾಸಿಗೆಗಳ ಹೆಚ್ಚಳದ ಜೊತೆಗೆ ಅಗತ್ಯಕ್ಕೆ ತಕ್ಕಂತೆ ರೆಮ್ಡಿಸಿವಿರ್ ಔಷಧ ಪೂರೈಸುವ ಮೂಲಕ ಕೋವಿಡ್ ವಿರುದ್ಧ ಹೋರಾಡಲು ಅಗತ್ಯ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಈ ಹಿಂದೆ ಸೂಚಿಸಿದಂತೆ ಎರಡೂ ಇಲಾಖೆಗಳ ಸಮನ್ವಯದಿಂದ ಈ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಾಗಿದೆ ಎಂದು ವೈದ್ಯಕೀಯ ಮತ್ತು ಆರೋಗ್ಯ ಸಚಿವ ಕೆ. ಸುಧಾಕರ್ ನಿನ್ನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.
ಫೆಬ್ರವರಿ ಅಂತ್ಯಕ್ಕೆ 60–70 ಸಾವಿರ ಕೋವಿಡ್ ಪರೀಕ್ಷೆ ನಡೆಯುತ್ತಿದ್ದವು. ಬಳಿಕ, ಒಂದೂವರೆ ಲಕ್ಷಕ್ಕೆ ಏರಿಸಲಾಗಿದೆ. ಮೇ.22ರವರೆಗೆ 2.85 ಕೋಟಿ ಜನರಿಗೆ ಟೆಸ್ಟ್ ನಡೆಸಲಾಗಿದೆ. ಇದರಲ್ಲಿ, 2.38 ಕೋಟಿ ಆರ್ಟಿ–ಪಿಸಿಆರ್ ಟೆಸ್ಟ್ ನಡೆಸಲಾಗಿದೆ.
1,970ರಷ್ಟಿದ್ದ ಆಮ್ಲಜನಕ ಹಾಸಿಗೆಗಳ ಜೊತೆಗೆ 22,001 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ಆಮ್ಲಜನಕ ಹಾಸಿಗೆ ಸಾಮರ್ಥ್ಯ 23,971ಕ್ಕೆ ಹೆಚ್ಚಾಗಿದೆ.
610ರಷ್ಟಿದ್ದ ವೆಂಟಿಲೇಟರ್ ಜೊತೆಗೆ 1,548 ಹೊಸ ವೆಂಟಿಲೇಟರ್ ಸೇರಿಸಲಾಗಿದ್ದು, ಒಟ್ಟು ವೆಂಟಿಲೇಟರ್ ಸಂಖ್ಯೆ 2,158ಕ್ಕೆ ಹೆಚ್ಚಳವಾಗಿದೆ.