ಬೆಂಗಳೂರು: ‘ಮಾನವ– ವನ್ಯಜೀವಿ ಸಂಘರ್ಷದಿಂದ ಹಸು, ಎಮ್ಮೆ, ಕೋಣ ಮೃತಪಟ್ಟರೆ ಅವುಗಳ ಮಾಲೀಕರಿಗೆ ಸದ್ಯ ನೀಡಲಾಗುತ್ತಿರುವ ಪರಿಹಾರಧನವನ್ನು ₹ 10 ಸಾವಿರದಿಂದ ₹ 75 ಸಾವಿರಕ್ಕೆ ಹೆಚ್ಚಿಸಲಾಗಿದೆ’ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಈ ಸಂಬಂಧಸರ್ಕಾರದಿಂದ ಮಂಗಳವಾರವೇ ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
‘ವನ್ಯಜೀವಿಗಳಿಂದ ಸಾಕು ಪ್ರಾಣಿಗಳ ಹತ್ಯೆ ನಡೆದರೆ ತಕ್ಷಣಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ₹ 20 ಸಾವಿರ ಬಿಡುಗಡೆ ಮಾಡಲು ಅವಕಾಶ ನೀಡಲಾಗಿದೆ. ಆ ನಂತರ ಸ್ಥಳೀಯ ಪಶು ವೈದ್ಯಾಧಿಕಾರಿಗಳು ಸತ್ತ ಸಾಕು ಪ್ರಾಣಿಯನ್ನು ಪರಿಶೀಲಿಸಿ ಪ್ರಮಾಣಪತ್ರ ನೀಡಿದ ನಂತರ ಉಳಿದ ಮೊತ್ತ (ಗರಿಷ್ಟ ₹ 75,000) ಪಾವತಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.
‘ಅಲ್ಲದೆ, ಕುರಿ, ಮೇಕೆ, ಆಡು ಮೃತಪಟ್ಟರೆ ಈಗ ನೀಡುತ್ತಿರುವ ₹ 5,000 ಪರಿಹಾರ ಧನವನ್ನು ₹ 10 ಸಾವಿರಕ್ಕೆ ಹೆಚ್ಚಿಸಲಾಗಿದೆ’ ಎಂದು ಲಿಂಬಾವಳಿ ತಿಳಿಸಿದ್ದಾರೆ.
‘ಪರಿಹಾರಧನ ಹೆಚ್ಚಿಸುವಂತೆ ಜನಪ್ರತಿನಿಧಿಗಳು, ರೈತರು ಮತ್ತು ಸಾರ್ವಜನಿಕರ ಬೇಡಿಕೆ ಮುಂದಿಟ್ಟಿದ್ದರು’ ಎಂದು ಅವರು ತಿಳಿಸಿದ್ದಾರೆ.