ಮೈಸೂರು: ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಭಾನುವಾರ ಒಂದು ದಿನದ ಉಪವಾಸ ನಡೆಸಿದರು.
ಹೆಗ್ಗೋಡುವಿನಿಂದ ಶನಿವಾರ ರಾತ್ರಿ ಉಪವಾಸ ಕೈಗೊಂಡು ಭಾನುವಾರ ನಸುಕಿನಲ್ಲಿ ಮೈಸೂರು ತಲುಪಿದ ಅವರು ಸ್ನೇಹಿತರ ಮನೆಯಲ್ಲಿ ಕೆಲಕಾಲ ವಿಶ್ರಾಂತಿ ಪಡೆದರು. ಬಳಿಕ ರಂಗಾಯಣ ಆವರಣಕ್ಕೆ ಬಂದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ರಂಗಾಯಣದ ‘ಬಹುರೂಪಿ’ ಉತ್ಸವದ ಸಮಾರೋಪದಲ್ಲಿ ನಡೆದಿದ್ದ ಮರ್ಯಾದೆ ಮೀರಿದ ಘಟನೆ ಹೋರಾಟಕ್ಕೆ ಪ್ರೇರಣೆ ನೀಡಿದೆ. ಅವರನ್ನು ಕ್ಷಮಿಸಿದ್ದೇವೆ. ಅವರೂ ಕ್ಷಮೆ ಒಪ್ಪಿದ್ದಾರೆ. ರಂಗಭೂಮಿ, ಸಾಂಸ್ಕೃತಿಕ ಮರ್ಯಾದೆ ಕಾಪಾಡುವ ಕೆಲಸಕ್ಕಾಗಿ ಹೋರಾಟ ಆರಂಭಿಸಲಾಗುವುದು’ ಎಂದರು.
‘ಒಂದೂವರೆ ತಿಂಗಳು ಎಲ್ಲರ ಬಳಿಗೆ ಹೋಗುವೆ. ಎಲ್ಲರೂ ಹೋರಾಟದಲ್ಲಿ ಭಾಗವಹಿಸಬೇಕು. ದೇಗುಲಕ್ಕೆ ಹೋದಂತೆ ಕೈ, ಕಾಲು ಹಾಗೂ ಮನಸ್ಸು ತೊಳೆದುಕೊಂಡು ಬಂದು ಸಮಷ್ಠಿಯ ಹಿತದ ಮಾತುಗಳನ್ನಾಡಬೇಕು’ ಎಂದು ಹೇಳಿದರು.
‘ಎಲ್ಲ ಸಂಸ್ಥೆಗಳೂ ಮರ್ಯಾದೆಯ ಸಂಸ್ಥೆಗಳಾಗಬೇಕು. ರಾಮರಾಜ್ಯದ ಮರ್ಯಾದೆ ಎಂದರೆ ಶ್ರಮಜೀವದ ಮರ್ಯಾದೆ ಹೊರತು ಪೂಜಾರಿ ಸಂಸ್ಕೃತಿಯ ಮರ್ಯಾದೆಯಲ್ಲ’ ಎಂದರು.
‘ಸಂಸ್ಕೃತಿ, ಭಾಷೆ ಕಲಿಸಬಲ್ಲ ಮಾಧ್ಯಮಗಳನ್ನು ಸರ್ಕಾರ ಕಪಿಮುಷ್ಠಿಯಲ್ಲಿರಿಸಿಕೊಂಡಿದೆ. ರಂಗಪ್ರದರ್ಶನ ಅಥವಾ ಕಲೆ, ಸಂಸ್ಕೃತಿಯ ವಿಷಯದಜನರನ್ನು ಸರ್ಕಾರ ಭಿಕ್ಷುಕರಂತೆ ಕಾಣುತ್ತಿದೆ. ಅಧಿಕಾರಿಶಾಹಿ ಕುತ್ತಿಗೆ ಹಿಚುಕುತ್ತಿದೆ’ ಎಂದು ಕಿಡಿಕಾರಿದರು.