ಆನಂದಪುರ (ಶಿವಮೊಗ್ಗಜಿಲ್ಲೆ): ‘ಇನ್ನು ಮುಂದೆ ಕಾರು ಹೊಂದಿದವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶನಿವಾರ ಹೇಳಿದರು.
ಮುರುಘಾ ಮಠದಲ್ಲಿ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು, ‘ಈಗ ₹50,000 ಹಾಗೂ ₹ 1 ಲಕ್ಷಕ್ಕೂ ಹಳೆ ಕಾರುಗಳು ಸಿಗುತ್ತವೆ. ಗಾರೆ ಮಾಡುವವರು, ಮೀನು ಹಿಡಿಯುವವರೂ ಕಾರು ತೆಗೆದುಕೊಂಡು ಹೋಗುತ್ತಾರೆ. ಅಂತವರ ಕಾರ್ಡ್ ಸಹಿತ ರದ್ದಾಗಿರುವುದು ಸರಿಯಲ್ಲ’ ಎಂದರು.
‘ಈ ವಿಷಯವಾಗಿ ಶಾಸಕ ಎಚ್.ಹಾಲಪ್ಪ ಹರತಾಳು ಹಾಗೂ ನಾನು ಮುಖ್ಯಮಂತ್ರಿ ಬಳಿ ಚರ್ಚಿಸಿದ್ದೇವೆ. ಈ ಕಾನೂನಿನಿಂದ ಬಡವರು ಹೊಂದಿರುವ ಕಾರ್ಡ್ ರದ್ದಾಗುತ್ತದೆ. ಅವರ ಜೀವನಾಧಾರಕ್ಕೆ ತೊಂದರೆ ಆಗುತ್ತದೆ ಎಂದು ಮನವರಿಕೆ ಮಾಡಿದ್ದೇವೆ. ಬಡವರ ಮೇಲೆ ಕರುಣೆ ತೋರಿ ಸಿ.ಎಂ ಆದೇಶ ಹೊರಡಿಸುತ್ತಾರೆ’ ಎಂದರು.