ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸದ್ಯ, ಲಾಕ್ ಡೌನ್ ಅಥವಾ ಸೆಮಿ ಲಾಕ್ಡೌನ್ ಪರಿಸ್ಥಿತಿ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಆದರೆ, ಕೋವಿಡ್ ಹರಡುವಿಕೆ ತಡೆಗೆ ತಜ್ಞರ ವರದಿ ಆಧರಿಸಿ ಕಠಿಣ ರೂಲ್ಸ್ ಜಾರಿಗೆ ಸರ್ಕಾರ ಮುಂದಾಗಲಿದೆ. ಜನರು ಸದ್ಯ ಮಾಸ್ಕ್ ಮರೆತಿದ್ದಾರೆ. ಮಾಸ್ಕ್ ಧರಿಸದವರಿಗೆ ₹250ರವರೆಗೆ ದಂಡ ವಿಧಿಸಲು ಇಂದು ಅಥವಾ ನಾಳೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದೇವೇಳೆ, ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಡಲು ತಜ್ಞರು ಸೂಚಿಸಿದ್ದಾರೆ. ಕೇರಳ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಜನರು ರಾಜ್ಯಕ್ಕೆ ಬರುವಾಗ ಕೋವಿಡ್ ಟೆಸ್ಟ್ ವರದಿ ತರಬೇಕು ಅಥವಾ ಗಡಿಗಳಲ್ಲಿ ಸ್ಥಳದಲ್ಲಿಯೇ ಕೋವಿಡ್ ಟೆಸ್ಟ್ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ಇನ್ನೂ, ಮದುವೆ ಸೇರಿದಂತೆ ಗುಂಪು ಸೇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ. ನಿಯಮ ಮೀರಿದರೆ ಕಾರ್ಯಕ್ರಮ ಆಯೋಜಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಚರ್ಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು.