ಬೆಂಗಳೂರು: ‘ಅನುವಾದ ಎಂಬುದು ಎರಡನೇ ದರ್ಜೆಯ ಸಾಹಿತ್ಯ ಸೃಷ್ಟಿಯಲ್ಲ. ಮೂಲ ಲೇಖಕನಿಗೆ ಮೀರಿದ ಯಶಸ್ಸು ತಂದುಕೊಡುವ ಕಾರ್ಯ’ ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಜಾಲಮಂಗಲದ ಸಾಹಿತ್ಯ ಸಂಗಮ ಟ್ರಸ್ಟ್ ಹಾಗೂ ಕಿರಂ ಪ್ರಕಾಶನದ ವತಿಯಿಂದ ಬಾಲಗಂಗಾಧರನಾಥ ಸ್ವಾಮೀಜಿ ಬುಕ್ ಹೌಸ್ನಲ್ಲಿ ಏರ್ಪಡಿಸಿದ್ದ ಕರೀಗೌಡ ಬೀಚನಹಳ್ಳಿ ಅವರ ಭಾಷಾಂತರ ಕಥೆಗಳ ಸಂಕಲನ ‘ಮಾಯಾಗನ್ನಡಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಭಾಷಾಂತರ ಎಂದರೆ ಬರಿಯ ಸಂಪರ್ಕ ಸಾಧನ ಅಷ್ಟೇ ಅಲ್ಲ. ಇನ್ನೊಂದು ಸಂಸ್ಕೃತಿಯನ್ನು ಒಳಹೊಕ್ಕು ನೋಡುವ ಬಗೆ. ಮೂಲ ಕೃತಿಗೆ ಕೊಂಚವೂ ಊನವಾಗದಂತೆ ಅನುವಾದ ಮಾಡಬೇಕಾಗುತ್ತದೆ. ಅದು ಸುಲಭದ ಕೆಲಸ ಅಲ್ಲ. ಬೀಚನಹಳ್ಳಿ ಕರೀಗೌಡ ಅವರು ನಿವೃತ್ತ ಜೀವನದಲ್ಲಿ ಕಾಲಹರಣ ಮಾಡದೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ’ ಎಂದರು.
ಕೃತಿ ಬಿಡುಗಡೆ ಮಾಡಿದ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ‘ಇತ್ತೀಚಿನ ದಿನಗಳಲ್ಲಿ ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಓದುವ ಅಭ್ಯಾಸ ಹೆಚ್ಚಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.
ಕೃತಿಕಾರ ಕರೀಗೌಡ ಬೀಚನಹಳ್ಳಿ ಮಾತನಾಡಿ, ‘14 ವರ್ಷಗಳ ಕಾಲ ಭಾಷಾಂತರ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದ ಮಾಡಿದ ಎಲ್ಲಾ ಕಥೆಗಳನ್ನು ‘ಮಾಯಾಗನ್ನಡಿ’ ಹೆಸರಿನಲ್ಲಿ ಹೊರ ತಂದಿದ್ದೇನೆ’ ಎಂದರು.