ಬೆಂಗಳೂರು: ಪಾರಿವಾಳ ಹಿಡಿಯಲು ಹೋಗಿದ್ದ ವೇಳೆ ಇಬ್ಬರು ಮಕ್ಕಳಿಗೆ ವಿದ್ಯುತ್ ಪ್ರವಹಿಸಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೃಷ್ಣಾನಂದ ಹಾಗೂ ವಿಜಯಾನಂದ ನಿವಾಸಿಗಳಾದ ಸುಪ್ರೀತ್ (11) ಹಾಗೂ ಚಂದ್ರು (10) ಗಾಯಗೊಂಡ ಮಕ್ಕಳು.
ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬನಿಗೆ ಶೇ 50ರಷ್ಟು, ಮತ್ತೊಬ್ಬನಿಗೆ ಶೇ 90ರಷ್ಟು ಸುಟ್ಟ ಗಾಯವಾಗಿದೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಾನಂದ ಬಡಾವಣೆಯಲ್ಲಿ ಘಟನೆ ನಡೆದಿದೆ.
‘ಕಬ್ಬಿಣದ ಸರಳಿನ ಮೇಲೆ ಪರಿವಾಳಗಳಿದ್ದವು. ಅವುಗಳನ್ನು ಹಿಡಿಯಲು ತೆರಳಿದಾಗ ಪಕ್ಕದಲ್ಲಿಯೇ ಹಾದು ಹೋಗಿದ್ದ ಹೈಟೆನ್ಶನ್ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿದ್ದರಿಂದ ಮಕ್ಕಳು ಗಾಯಗೊಂಡಿದ್ಧಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಚಿವ ಕೆ.ಗೋಪಾಲಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು.