ಹುಬ್ಬಳ್ಳಿ: 'ಆಂಧ್ರಪ್ರದೇಶ, ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಫಾರ್ಮಾ ಪಾರ್ಕ್ ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ' ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಫಾರ್ಮಾ ಪಾರ್ಕ್ ಸ್ಥಾಪಿಸಲು ಅನುಮತಿ ಕೋರಿ ದೇಶದ ವಿವಿಧ ರಾಜ್ಯಗಳಿಂದ ಪ್ರಸ್ತಾವಗಳು ಬಂದಿದ್ದವು. ರಾಜ್ಯದ ಯಾದಗಿರಿಯಲ್ಲಿ ಸ್ಥಾಪಿಸಲು ರಾಜ್ಯದಿಂದಲೂ ಪ್ರಸ್ತಾವ ಬಂದಿತ್ತು. ರಾಜ್ಯ ಸರ್ಕಾರಗಳು ನೀಡಿದ ಸೌಲಭ್ಯ ಹಾಗೂ ಅನುಕೂಲತೆಗಳನ್ನು ಪರಿಗಣಿಸಿ ನೀತಿ ಆಯೋಗ ಮೂರು ರಾಜ್ಯಗಳನ್ನು ಆಯ್ಕೆ ಮಾಡಿದೆ' ಎಂದರು.
'ದೇಶದಲ್ಲಿ ನ್ಯಾನೋ ಗೊಬ್ಬರ ಪ್ರಸಿದ್ಧಿ ಪಡೆಯುತ್ತಿದ್ದು, ರೈತರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಲಾಗುತ್ತಿದ್ದಾರೆ. ಈ ಗೊಬ್ಬರದಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯಬಹುದಾಗಿದ್ದು, ಸರ್ಕಾರದಿಂದ ಸಬ್ಸಿಡಿ ಸಹ ದೊರೆಯುತ್ತಿದೆ' ಎಂದು ಹೇಳಿದರು.
'ಕೋವಿಡ್ ಮತ್ತು ಬೆಲೆ ಏರಿಕೆಯಿಂದ ವಿದೇಶಗಳಲ್ಲಿ ರಸಗೊಬ್ಬರ ಕಾರ್ಖಾನೆಗಳು ಬಂದ್ ಆಗಿದ್ದರಿಂದ, ಅಲ್ಲಿ ಗೊಬ್ಬರದ ದರ ನಾಲ್ಕುಪಟ್ಟು ಹೆಚ್ಚಾಗಿದೆ. ಭಾರತದಲ್ಲಿ ಅಂತಹ ಪರಿಸ್ಥಿತಿ ಎದುರಾಗಿಲ್ಲ. ರೈತರಿಗೆ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ಸಿಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಬಂದ್ ಆಗಿದ್ದ ಐದು ರಸಗೊಬ್ಬರ ಕಾರ್ಖಾನೆಗಳನ್ನು ಪುನರಾರಂಭಿಸಲಾಗಿದೆ' ಎಂದು ತಿಳಿಸಿದರು.