ಬೆಂಗಳೂರು: ಮಧುಗಿರಿ ನ್ಯಾಯಾಲಯ ಹೊರಡಿಸಿರುವ ಜಾಮೀನು ರಹಿತ ವಾರಂಟ್ ರದ್ದುಪಡಿಸಲು ಕೋರಿ ತೆಲುಗಿನ ಕವಿ ವರವರ ರಾವ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲನೆ ಬಳಿಕ ಒಂದೆರಡು ದಿನಗಳಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ವೆಂಕಟಮ್ಮನಹಳ್ಳಿಯಲ್ಲಿ 2005ರಲ್ಲಿ ನಡೆದಿದ್ದ ನಕ್ಸಲ್ ದಾಳಿ ಪ್ರಕರಣದ ಆರೋಪಿಗಳಲ್ಲಿ ವರವರ ರಾವ್ ಕೂಡ ಒಬ್ಬರು. ನಕ್ಸಲರು ನಡೆಸಿದ ದಾಳಿಯಲ್ಲಿ ಪೊಲೀಸರು ಸೇರಿ ಎಂಟು ಮಂದಿ ಮೃತಪಟ್ಟಿದ್ದರು.
ನ್ಯಾಯಾಲಯಕ್ಕೆ ಹಾಜರಾಗದ ವರವರ ರಾವ್ ಅವರಿಗೆ ಮಧುಗಿರಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅ.21ರಂದು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಅ.28ರೊಳಗೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನಿರ್ದೇಶನ ನೀಡಿತ್ತು.
2019ರ ನವೆಂಬರ್ 28ರಂದೇ ಜಾಮೀನು ಪಡೆಯಲಾಗಿದೆ ಎಂದು ರಾವ್ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. ‘ಬಾಡಿ ವಾರೆಂಟ್ ಹಿಂಪಡೆಯಲು ಕೋರಿದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿರುವ ನ್ಯಾಯಾಲಯ, ಜಾಮೀನು ರಹಿತ ವಾರಂಟ್ ಹೊರಡಿಸಿದೆ’ ಎಂದು ಅವರು ಹೇಳಿದ್ದಾರೆ.
‘ಭೀಮ ಕೋರೆಗಾಂವ್ ಪ್ರಕರಣದಲ್ಲಿ ಒಂದು ತಿಂಗಳ ಅವಧಿಗೆ ಷರತ್ತುಬದ್ಧ (ವೈದ್ಯಕೀಯ ಕಾರಣಗಳಿಗಾಗಿ) ಜಾಮೀನನ್ನು ಬಾಂಬೆ ಹೈಕೋರ್ಟ್ ನೀಡಿದೆ. ವ್ಯಾಪ್ತಿ ಬಿಟ್ಟು ಹೊರಕ್ಕೆ ಹೋಗದಂತೆ ಮುಂಬೈನ ಎನ್ಐಎ ನ್ಯಾಯಾಲಯ ಷರತ್ತು ವಿಧಿಸಿದೆ’ ಎಂದು ಅರ್ಜಿಯಲ್ಲಿ ಅವರು ವಿವರಿಸಿದ್ದಾರೆ.
‘ಮಧುಗಿರಿ ನ್ಯಾಯಾಲಯದ ಮುಂದೆ ಹಾಜರಾಗದಿರುವುದು ಉದ್ದೇಶ ಪೂರ್ವಕವಲ್ಲ. ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕು’ ಎಂದು ಕೋರಿದ್ದಾರೆ.
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿ ಶಾಲೆಯ ಬಳಿ2005ರ ಫೆಬ್ರುವರಿ 10ರ ರಾತ್ರಿ ನಕ್ಸಲರು ನಡೆಸಿದ ದಾಳಿಗೆ ಕೆಎಸ್ಆರ್ಪಿ 7 ಪೊಲೀಸರು ಮತ್ತು ಒಬ್ಬ ನಾಗರಿಕ ಹತರಾಗಿದ್ದರು. ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್ಕೌಂಟರ್ಚಿಕ್ಕಮಗಳೂರು ಜಿಲ್ಲೆಯ ಮೆಣಸಿನಹಾಡ್ಯದಲ್ಲಿ 2005ರ ಫೆಬ್ರುವರಿ 5ರಂದು ನಡೆದಿತ್ತು. ಇದಕ್ಕೆ ಪ್ರತೀಕಾರವಾಗಿ ನಕ್ಸಲರು ಈ ದಾಳಿ ನಡೆಸಿದ್ದರು.