ಬೆಂಗಳೂರು: ಕೀರ್ತನೆಗಳ ಗಾಯನದ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಪಂಡಿತ್ ವಿನಾಯಕ ತೊರವಿ ಅವರು 2022ನೇ ಸಾಲಿನ ‘ನಿರ್ಮಾಣ್–ಪುರಂದರ ಸಂಗೀತರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
‘ದಾಸ ಸಾಹಿತ್ಯ ಹಾಗೂ ದಾಸರ ಪದಗಳ ಹಿರಿಮೆ ಹೆಚ್ಚಿಸುವ ಸಲುವಾಗಿ ವಿ. ಲಕ್ಷ್ಮೀನಾರಾಯಣ ಅವರು ವಿ.ಎಲ್.ಎನ್. ನಿರ್ಮಾಣ್ ಪುರಂದರ ಪ್ರತಿಷ್ಠಾನ ಆರಂಭಿಸಿದ್ದಾರೆ. ಸಂಸ್ಥೆಯು ನಾಡಿನ ಪ್ರಸಿದ್ಧ ಸಂಗೀತಗಾರರನ್ನು ಗುರುತಿಸಿ ಅವರಿಗೆಸತತ 12 ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬಂದಿದೆ’ ಎಂದು ಪ್ರಕಟಣೆ ತಿಳಿಸಿದೆ.
‘ವಿದ್ಯಾಭೂಷಣ ಅರಳುಮಲ್ಲಿಗೆ ಪಾರ್ಥಸಾರಥಿ ಹಾಗೂ ವಿ. ಲಕ್ಷ್ಮೀನಾರಾಯಣ ಅವರನ್ನೊಳಗೊಂಡ ಆಯ್ಕೆ ಸಮಿತಿಯುವಿನಾಯಕ ತೊರವಿಯವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ₹1 ಲಕ್ಷ ನಗದು, ಪುರಂದರ ದಾಸರ ಚಿತ್ರವಿರುವ ಸ್ವರ್ಣಹಾರ ಹಾಗೂ ಅಭಿನಂದನಾ ಪತ್ರ ಹೊಂದಿರಲಿದೆ’ ಎಂದೂ ತಿಳಿಸಿದೆ.