ಬೆಂಗಳೂರು: ‘ಇವತ್ತು ಸಾಮಾಜಿಕ ವ್ಯವಸ್ಥೆ ಕುಸಿಯುತ್ತಿದೆ ಎಂಬುದನ್ನು ಅರಿಯದೆ ಕೆಲವರು ತಮ್ಮ ಆಡಳಿತ, ಕುರ್ಚಿ ಉಳಿಸಿಕೊಳ್ಳಲು ಏನೆಲ್ಲ ಮಾಡಬೇಕೊ ಅದನ್ನು ಮಾಡುತ್ತಿದ್ದಾರೆ’ ಎಂದು ಸಂಸದ ಡಿ.ವಿ.ಸದಾನಂದಗೌಡ ಆತಂಕ ವ್ಯಕ್ತಪಡಿಸಿದರು.
ಶನಿವಾರ ಇಲ್ಲಿ ನಡೆದ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಎರಡನೇ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬಸವಣ್ಣನ ತತ್ವಕ್ಕೆ ನಾನು ಅಪಚಾರ ಮಾಡುವುದಿಲ್ಲ’ ಎಂದ ಅವರು, ‘ಇವನಾರವ, ಇವನಾರವ ಎಂದೆಣಿಸದೆ ಸಾಗಬೇಕಿದೆ’ ಎಂದರು.
ಇವತ್ತು ಸಮಾನತೆಯ ಬಗ್ಗೆ ಮಾತನಾಡುವವರು ನೈತಿಕತೆ ಉಳಿಸಿಕೊಂಡಿಲ್ಲ. ಅವರಿಗೆ ಆ ಹಕ್ಕೂ ಇಲ್ಲ. ಕೇವಲ ನೀತಿ ಕಥೆಗಳನ್ನು ಪ್ರಪಂಚಕ್ಕೆ ತೋರಿಸುತ್ತಿದ್ದಾರೆ. ನೀತಿಯ ಬೇರು ಕಾಯಕದ ಅಡಿಯಲ್ಲಿ ಇದೆ ಎಂಬುದನ್ನು ಮರೆತಿದ್ದಾರೆ ಎಂದು ವಿಷಾದಿಸಿದರು.
ನಾವು ವಚನಗಳ ಅನುಷ್ಠಾನ ಮಾಡದೇ ಇರುವ ಕಾರಣಕ್ಕಾಗಿಯೇ ಮೀಸಲಾತಿ ಇಂದಿಗೂ ಉಳಿದಿದೆ. ವಚನಗಳ ಅನುಷ್ಠಾನದಿಂದ ಅದ್ಭುತ ಜಗತ್ತು ಸಾಧ್ಯವಿದೆ. ವಚನಗಳ ವಿಚಾರ, ವಸ್ತುನಿಷ್ಠತೆ ಭಾಷಣ ಮತ್ತು ಪ್ರಚಾರಕ್ಕೆ ಮಾತ್ರವೇ ಸೀಮಿತವಾಗಬಾರದು ಎಂದರು.
ಎಲ್ಲರೂ ಸಮಾಜಕ್ಕೆ ಒಳ್ಳೆಯದನ್ನೇ ಮಾಡಬೇಕು. ಅದರಲ್ಲೂ ಮಾಧ್ಯಮಗಳು ವಚನ ಸಾಹಿತ್ಯದ ತತ್ವಗಳನ್ನು ಅರ್ಥ ಮಾಡಿಕೊಂಡು ಇವತ್ತಿನ ವಿದ್ಯಮಾನಗಳನ್ನು ತಣಿಸುವ ಮಾರ್ಗದಲ್ಲಿ ಸಾಗುವ ಅವಶ್ಯಕತೆ ಇದೆ ಎಂದರು.