ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನದ ಆವರಣದಲ್ಲಿ ಟೋಪಿ, ಗಡ್ಡ ಬಿಟ್ಟರೆ ಇಂಥ ಘಟನೆ ಸಹಜ: ಅರವಿಂದ ಬೆಲ್ಲದ

Last Updated 12 ಏಪ್ರಿಲ್ 2022, 5:02 IST
ಅಕ್ಷರ ಗಾತ್ರ

ಧಾರವಾಡ: ‘ಹಿಂದೂ ದೇವಾಲಯದ ಎದುರು ಮುಸ್ಲಿಂ ವ್ಯಾಪಾರಿಗಳು ತಲೆ ಮೇಲೆ ದೊಡ್ಡ ಟೋಪಿ ಧರಿಸಿಗಡ್ಡ ಬಿಟ್ಟು, ಮೀಸೆ ಬೋಳಿಸಿ, ಪೈಜಾಮ ಹಾಕಿಕೊಂಡು ಇದ್ದರೆ ಹಿಂದೂಗಳಿಗೆ ಏನೆನಿಸಬೇಕು?’ ಎಂದು ಶಾಸಕ ಅರವಿಂದ ಬೆಲ್ಲದ ಪ್ರಶ್ನಿಸಿದ್ದಾರೆ.

ಶ್ರೀರಾಮಸೇನೆ ಕಾರ್ಯಕರ್ತರು ಶನಿವಾರ ದಾಂದಲೆ ನಡೆಸಿ ಮುಸ್ಲಿಮರಿಗೆ ಸೇರಿದ ಅಂಗಡಿಗಳನ್ನು ದ್ವಂಸಗೊಳಿಸಿದ ನಂತರ ಸೋಮವಾರ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

‘ಈಗ ಗುಡಿ ಆವರಣಕ್ಕೆ ಬಂದಿದ್ದಾರೆ. ಮುಂದೊಂದು ದಿನ ದೇವಾಲಯದ ಒಳಗೇ ಬರುತ್ತಾರೆ ಎಂಬ ಭಾವನೆ ಹಿಂದೂಗಳಲ್ಲಿ ಮೂಡಲಿದೆ. ಈಗ ನಡೆದಿರುವ ಘಟನೆ ಸೃಷ್ಟಿಸಿದವರು ಯಾರು ಎಂಬುದನ್ನು ಹಿಂದಕ್ಕೆ ಹೋಗಿ ನೋಡಬೇಕಿದೆ. ಇಂಥ ಪರಿಸ್ಥಿತಿ ಮರುಕಳಿಸಬಾರದು ಎಂದರೆ ಮೂಲ ಸಮಸ್ಯಗೆ ಪರಿಹಾರ ಕಂಡುಕೊಳ್ಳಬೇಕು’ ಎಂದರು.

‘ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ನೀಡಿದ ನಂತರ ಬಹಳಷ್ಟು ಕಡೆ ಮುಸ್ಲಿಮರು ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು. ಅವರ ಅಂಥ ಕ್ರಿಯೆಗೆ ಸಹಜವಾಗಿ ಈಗ ಎಲ್ಲೆಡೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಲೆ ಒಡೆದಾಗ ಇಲ್ಲದ ಕಾಳಜಿ, ಕಲ್ಲಂಗಡಿ ಒಡೆದಾಗ ಏಕೆ? ಎಂಬ ಸಿ.ಟಿ.ರವಿ ಹೇಳಿಕೆ ಸಮರ್ಪಕವಾಗಿದೆ’ ಎಂದು ಬೆಲ್ಲದ ಸಮರ್ಥಿಸಿಕೊಂಡರು.

ದೇವಾಲಯಕ್ಕೆ ಭೇಟಿ ನೀಡಿದ ಅಂಜುಮನ್ ಪದಾಧಿಕಾರಿಗಳು: ನುಗ್ಗಿಕೇರಿ ಆಂಜನೇಯ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿದ ಅಂಜುಮನ್ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿ, ಅಲ್ಲಿನ ಪರ್ಯಾಯಸ್ಥರೊಂದಿಗೆ ಚರ್ಚಿಸಿದರು.

‘ಶಾಂತಿ ಹಾಗೂ ಸೌಹಾರ್ದತೆಗೆ ಹೆಸರಾದ ಧಾರವಾಡದಲ್ಲಿ ಇಂಥ ಘಟನೆಗಳು ನಡೆಯಬಾರದಿತ್ತು. ಈ ದೇವಾಲಯ ತನ್ನ ಕೀರ್ತಿಗೆ ಜಗತ್‌ಪ್ರಸಿದ್ಧವಾಗಬೇಕೇ ಹೊರತು, ಇಂಥ ಅಪಕೀರ್ತಿಗಲ್ಲ. ಹೀಗಾಗಿ ಇಲ್ಲಿ ಸೌಹಾರ್ದತೆ ನೆಲೆಸುವಂತೆ ಸಮಾಜದ ಪ್ರತಿಯೊಬ್ಬರೂ ಸೇರಿ ಮಾಡಬೇಕಿದೆ’ ಎಂದು ಇಸ್ಮಾಯಿಲ್ ತಮಟಗಾರ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪರ್ಯಾಯಸ್ಥ ನರಸಿಂಹ ದೇಸಾಯಿ, ‘ಇಲ್ಲಿ ಎಲ್ಲಾ ಸಮುದಾಯವರಿಗೂ ಅವಕಾಶ ಮಾಡಿಕೊಡಲಾಗಿದೆ. ನಮ್ಮ ಉದ್ದೇಶವೂ ಪ್ರತಿಯೊಬ್ಬರೂ ಸೋದರರಂತೆ ಬಾಳುವುದೇ ಆಗಿದೆ. ಈ ಕುರಿತು 12 ಜನ ಪರ್ಯಾಯಸ್ಥರು ಸಭೆ ಸೇರಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ, ‘ಖಾಸಗಿ ಟ್ರಸ್ಟ್ ಆಗಿರುವ ನುಗ್ಗಿಕೇರಿ ದೇವಾಲಯದಲ್ಲಿ ನಡೆದಿರುವುದು ಒಂದು ಆಕಸ್ಮಿಕ ಘಟನೆ. ಈಗಾಗಲೇ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇಂಥ ಘಟನೆ ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT