ಹಾಸನ: ‘ಶಾಲೆ ಪ್ರಾರಂಭವಾಗಿ ಒಂದು ತಿಂಗಳಾದರೂ ಪಠ್ಯ ಪುಸ್ತಕ ಬಂದಿಲ್ಲ. ಯಾವಾಗ ಕೊಡ್ತೀರಿ?’ ಎಂದು ವಿದ್ಯಾರ್ಥಿಗಳು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಪ್ರಶ್ನಿಸಿದರು.
ಬೇಲೂರು ರಣಘಟ್ಟ ಯೋಜನೆ ಕಾಮಗಾರಿ ಪ್ರಗತಿ ವೀಕ್ಷಣೆಗೆ ಬಂದಿದ್ದ ರವಿ ಅವರು ಚಿಲ್ಕೂರು ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ, ಮನೆ ಕಡೆಗೆ ತೆರಳುತ್ತಿದ್ದ ಇಬ್ಬೀಡು ಶ್ರೀ ಶಿವನಂಜುಂಡೇಶ್ವರ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ‘ಪಠ್ಯಪುಸ್ತಕಗಳು ವಿತರಣೆಯಾಗಿಲ್ಲ’ ಎಂದು ದೂರಿದರು.
‘ಸಮಾಜ ವಿಜ್ಞಾನ ಮತ್ತು ಕನ್ನಡ ಪುಸ್ತಕ ಬಂದಿಲ್ಲ, ನಮಗೆ ಪರೀಕ್ಷೆ ಬರೆಯೋದಕ್ಕೆ ಕಷ್ಟ ಆಗುತ್ತೆ’ ಎಂದರು.
‘ನೀವು ಬುದ್ಧಿವಂತರಿದ್ದೀರಿ, ಪಾಸ್ ಆಗ್ತೀರಿ ಬಿಡಿ. ಪಠ್ಯಪುಸ್ತಕ ಆದಷ್ಟು ಶೀಘ್ರ ಬರಲಿದೆ’ ಎಂದು ರವಿ ಹೇಳಿದರು.