ಧಾರವಾಡ: ಮನೆಯಲ್ಲಿ ಆಯತಪ್ಪಿ ಬಿದ್ದ ಪರಿಣಾಮ ಮಿದುಳು ನಿಷ್ಕ್ರಿಯ ಗೊಂಡ ಶಿರಸಿ ಮೂಲದ ಮಹಿಳೆಯ ಕುಟುಂಬದವರು, ಅಂಗಾಂಗ ದಾನದ ಮೂಲಕ ಐವರಿಗೆ ಹೊಸ ಜೀವನ ನೀಡಿ ಸಾರ್ಥಕತೆ ಮೆರೆದಿದ್ದಾರೆ.
53 ವರ್ಷದ ಮಹಿಳೆಯ ತಲೆಗೆ ಬಲವಾಗಿ ಪೆಟ್ಟಾಗಿತ್ತು. ಅವರನ್ನು ಇಲ್ಲಿನ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಜೂನ್ 25ರಂದು ವೈದ್ಯರು ಘೋಷಿಸಿದ ಮೇಲೆ ಹೀಗಾಗಿ ಮಹಿಳೆಯ ಅಂಗಾಂಗ ದಾನಕ್ಕೆ ಕುಟುಂಬ ಸದಸ್ಯರು ಒಪ್ಪಿಗೆ ಸೂಚಿಸಿದರು.
‘ಶನಿವಾರ ಬೆಳಿಗ್ಗೆ 9ರಿಂದ 11ರ ವರೆಗೆ ಶಸ್ತ್ರಕ್ರಿಯೆ ಮೂಲಕ ಯಕೃತ್, ಎರಡು ಮೂತ್ರಪಿಂಡ, ಎರಡು ಕಣ್ಣುಗಳನ್ನು ಬೇರ್ಪಡಿಸಿ ಸರ್ಕಾರಿ ಸ್ವಾಮ್ಯದ ‘ಜೀವ ಸಾರ್ಥಕತೆ’ಯಲ್ಲಿ ನೋಂದಾಯಿಸಿದವರಿಗೆ ಅಂಗಾಂಗ ಕಸಿ ಮಾಡಲು ಕಳುಹಿಸಲಾಯಿತು’ ಎಂದು ಎಸ್ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ಕುಮಾರ್ ತಿಳಿಸಿದರು.
‘ಎರಡು ಕಣ್ಣು ಹಾಗೂ ಮೂತ್ರ ಪಿಂಡಗಳನ್ನು ಎಸ್ಡಿಎಂ ಆಸ್ಪತ್ರೆಯಲ್ಲಿ ದಾಖಲಾದ ನೋಂದಾಯಿತ ವ್ಯಕ್ತಿಗಳಿಗೆ ಕಸಿ ಮಾಡಲಾಯಿತು. ಯಕೃತ್ ಅನ್ನು ಬೆಂಗಳೂರಿನ ಆಸ್ಟರ್ ಆರ್.ವಿ. ಆಸ್ಪತ್ರೆಗೆ ಸಾಗಿಸ ಲಾಯಿತು. ಹುಬ್ಬಳ್ಳಿ ವಿಮಾನ ನಿಲ್ದಾಣದವರೆಗೆ ಶೂನ್ಯ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು’ ಎಂದರು.