ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ವರ್ಷಗಳ ಹಿಂದಿನ ಪಠ್ಯಕ್ಕೆ ಅಪಾರ್ಥ ಮಾಡಿ ವಿವಾದ ಮಾಡುವುದೇ ಅಪ್ರಸ್ತುತ: ಬರಗೂರು

Last Updated 30 ಆಗಸ್ಟ್ 2022, 11:38 IST
ಅಕ್ಷರ ಗಾತ್ರ

ಬೆಂಗಳೂರು: ‘ನಲ್ವತ್ತು ವರ್ಷಗಳ ನಂತರ ನನ್ನ ಕಾದಂಬರಿಯ ಪಾತ್ರವೊಂದು ಕಟ್ಟಿದ ‘ನಗರಿಗೀತೆ’ಗೆ ಈಗ ಆಕ್ಷೇಪ ಕೇಳಿಬಂದಿರುವುದು ಆಶ್ಚರ್ಯ ತಂದಿದೆ. ಇದು ತೀರ ಆಕಸ್ಮಿಕವೊ, ಹುನ್ನಾರವೋ ತಿಳಿಯದು. ಕೆಲವು ತಿಂಗಳ ಹಿಂದೆ ನನ್ನ ಸಮಗ್ರ ಸಾಹಿತ್ಯ ಸಂಪುಟಗಳು ಬಂದಿದ್ದು, ಪರಿಷ್ಕರಿಸುವ ವೇಳೆ ರಾಷ್ಟ್ರಗೀತೆಯ ಲಯದಲ್ಲಿದ್ದ ಗೀತೆಯನ್ನು ಬಿಟ್ಟಿದ್ದೇನೆ. ಹೀಗಿರುವಾಗ 40 ವರ್ಷಗಳ ಹಿಂದಿನ ಪಠ್ಯ ಇಟ್ಟುಕೊಂಡು ಅಪಾರ್ಥ ಮಾಡಿ ವಿವಾದ ಮಾಡುವುದೇ ಅಪ್ರಸ್ತುತ. ಈಗ ಹಿಂದಿನ ಗೀತೆ ಇಲ್ಲ. ಇದು ಮುಖ್ಯ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ.

‘ಬರಗೂರು ರಾಮಚಂದ್ರಪ್ಪ ಅವರು ತಮ್ಮ ಕಾದಂಬರಿ ‘ಭರತ ನಗರಿ’ಯಲ್ಲಿ ರಾಷ್ಟ್ರಗೀತೆಯನ್ನು ಅವಹೇಳನ ಮಾಡಿದ್ದು, ಭಾರತವನ್ನು ‘ಜಡ ಭರತ’ ಎಂದು, ಗಂಗಾನದಿಯನ್ನು ‘ಹಾದರ’ ಎಂದು ಕರೆದಿದ್ದು, ಇವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಆರೋಪಿಸಿ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಬಿಜೆಪಿಯ ಕಾನೂನು ಪ್ರಕೋಷ್ಠ ದೂರು ನೀಡಿದ ಬೆನ್ನಲ್ಲೆ ಅವರು ಈ ಸ್ಪಷ್ಟನೆ ನೀಡಿದ್ದಾರೆ.

‘ಈ ಕಾದಂಬರಿಯನ್ನು ನಾನು 40 ವರ್ಷಗಳ ಹಿಂದೆ ಬರೆದಿದ್ದೆ. ಆಗ ದೇಶವನ್ನು ಕಾಂಗ್ರೆಸ್ ಪಕ್ಷ ಆಳುತ್ತಿತ್ತು. ಹದಗೆಟ್ಟ ರಾಜಕೀಯ ವ್ಯವಸ್ಥೆಯನ್ನು ವ್ಯಂಗ್ಯ, ವಿಡಂಬನೆಗಳಿಂದ ಚಿತ್ರಿಸಿದ ಈ ರೂಪಕಾತ್ಮಕ ಕಾದಂಬರಿಯಲ್ಲಿ ಒಬ್ಬ ಕ್ರಾಂತಿಕಾರಿ ಯುವಕನ ಪಾತ್ರವಿದೆ. ಆತನನ್ನು ಜೈಲಿಗೆ ಹಾಕಿ ಆಳುವ ವರ್ಗವು ತಮ್ಮ ಆಡಳಿತವನ್ನು ಹೊಗಳುವ ಗೀತೆ ಹಾಡಲು ಒತ್ತಾಯಿಸಿದಾಗ ಚಲನಶೀಲತೆಯನ್ನು ಕಳೆದುಕೊಂಡ ಭಾರತದ ಆಡಳಿತವನ್ನು ವಿಡಂಬಿಸಲು ‘ಜನಗಣಮನ’ದ ಲಯವನ್ನು ಬಳಸಿಕೊಳ್ಳುತ್ತಾನೆ. ಇದು ಆ ಪಾತ್ರದ ಸ್ವಭಾವ ಮತ್ತು ನಡವಳಿಕೆಯಾಗಿದೆ. ಇಷ್ಟಕ್ಕೂ ಹೀಗೆ ಗೀತೆ ಹಾಡಿದ ಆ ಯುವಕ ಗುಂಡೇಟಿಗೆ ಸಾಯುತ್ತಾನೆ. ಆಡಳಿತದ ಶಿಕ್ಷೆಗೆ ಗುರಿಯಾಗುತ್ತಾನೆ. ಕೃತಿಕಾರನಾದ ನಾನು ಕಾದಂಬರಿಯ ಎಲ್ಲ ಪಾತ್ರಗಳನ್ನೂ ಆಯಾ ಪಾತ್ರಗಳ ಗುಣಧರ್ಮ, ಸ್ವಭಾವಕ್ಕೆ ತಕ್ಕಂತೆ ಚಿತ್ರಿಸಬೇಕಾಗುತ್ತದೆ. ಆ ಪಾತ್ರಗಳ ಮಾತು ಮತ್ತು ನಡವಳಿಕೆ ಕೃತಿಕಾರರದಾಗುವುದಿಲ್ಲ. ಅದು ಆ ಪಾತ್ರದ ಅಭಿಪ್ರಾಯವೇ ಹೊರತು ನನ್ನದಲ್ಲ’ ಎಂದೂ ಹೇಳಿದ್ದಾರೆ.

‘ಒಟ್ಟು ಕೃತಿಯು ಹೊರಡಿಸುವ ಆಶಯ ಮಾತ್ರ ಕೃತಿಕಾರರದು. ನಾನು ಆ ಕಾಲದ ಕಾಂಗ್ರೆಸ್ ಆಡಳಿತ ವ್ಯವಸ್ಥೆಯನ್ನು ವಿಡಂಬನೆಗೆ ಒಡ್ಡಿ, ಒಟ್ಟು ಬದಲಾವಣೆಗೆ ಆಶಿಸಿದ್ದೇನೆ. ಜಾತಿ, ವರ್ಗ, ಭ್ರಷ್ಟತೆಗಳನ್ನು ಮೀರಿದ ಭಾರತ ನನ್ನ ಆದರ್ಶ ಎನ್ನುವುದು ಕೃತಿಯಲ್ಲಿರುವ ಆಶಯ. ಸೃಜನಶೀಲ ಕೃತಿಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳದೆ ನಾನು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದೇನೆಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ಈ ಮೂಲಕ, ನಾಡಗೀತೆಗೆ ಅವಮಾನ ಮಾಡಿದವರನ್ನು ಸಮರ್ಥಿಸಿಕೊಳ್ಳುವ ಹುನ್ನಾರ ವ್ಯಕ್ತವಾಗಿದೆ. ಇನ್ನು ಗಂಗೆಯನ್ನು ನಾನು ಅವಮಾನಿಸಿಲ್ಲ. ಗಂಗೆಯಂತಿರುವ ಸತ್ಯ, ಸಮಾನತೆಗಳನ್ನು ಕ್ಷುಲ್ಲಕ ರಾಜಕೀಯ ರಂಗವು ಅತ್ಯಾಚಾರ ಮಾಡುತ್ತಿದೆ ಎಂಬ ಅರ್ಥಕ್ಕಾಗಿ ಆ ಸಾಲುಗಳನ್ನು ಬರೆದಿದ್ದೇನೆ. ನನ್ನ ಒಟ್ಟು ಬರಹಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಸಹೃದಯರಿಗೆ ನನ್ನಲ್ಲಿರುವ ಸಮಾಜ ಬದಲಾವಣೆಯ ಆಶಯ ಮತ್ತು ದೇಶ ಬದ್ಧತೆ ಅರ್ಥವಾಗುತ್ತದೆ. ನಾನು ಸದಾ ಸಮಾಜಿಕ ಕಾಳಜಿಯ ದೇಶನಿಷ್ಠ ಲೇಖಕ. ಇಷ್ಟಾಗಿಯೂ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದರೆ, ಜನರಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ. ಇದು ಜನರಿಗೆ ನಾನು ಕೊಡುವ ಗೌರವ’ ಎಂದಿದ್ದಾರೆ.

‘ಕೆಲವು ತಿಂಗಳ ಹಿಂದೆ ನನ್ನ ಸಮಗ್ರ ಸಾಹಿತ್ಯ ಸಂಪುಟಗಳು ಬಂದಿವೆ. ಅದರಲ್ಲಿ ಪರಿಷ್ಕರಣೆ ಕೂಡ ಮಾಡಿದ್ದೇನೆ. ಅದರಲ್ಲಿ ‘ಭರತ ನಗರಿ’ ಕಾದಂಬರಿಯೂ ಒಂದು. ರಾಷ್ಟ್ರ ಗೀತೆಯ ಲಯದಲ್ಲಿದ್ದ ಗೀತೆಯನ್ನು ಬಿಟ್ಟಿದ್ದೇನೆ. ಅಂದರೆ ಹಿಂದಕ್ಕೆ ತೆಗೆದುಕೊಂಡು ಸಮತೆ ಮತ್ತು ಮಮತೆಯ ದೇಶ ಕಟ್ಟಬೇಕು ಎಂಬ ಗೀತೆ ಹಾಕಿದ್ದೇನೆ’ ಎಂದು ಬರಗೂರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT