ರಾಜ್ಯ ಸರ್ಕಾರ ನೇಮಿಸಿದ್ದ ಪ್ರಾಥಮಿಕ ಶಿಕ್ಷಣ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಎಸಗಿರುವ ಪ್ರಮಾದಗಳ ಬಗೆಗೆ ವ್ಯಕ್ತವಾಗಿರುವ ಸಾರ್ವಜನಿಕ ಪ್ರತಿಕ್ರಿಯೆಗೆ ಸ್ಪಂದಿಸಿ, ಪರಿಷ್ಕರಣ ಸಮಿತಿಯನ್ನು ರದ್ದುಗೊಳಿಸಿ, ಆಗಿರುವ ದೋಷಗಳನ್ನು ಸರಿಪಡಿಸುವ ಬಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಭರವಸೆಯನ್ನು ಸ್ವಾಗತಿಸುತ್ತೇನೆ. ಹಾಗೆಯೇ ಆ ಭರವಸೆಯ ಅನುಷ್ಠಾನಕ್ಕೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ತಿಳಿಸಿದ್ದಾರೆ.
ಪ್ರಸ್ತುತ ಪಠ್ಯಪುಸ್ತಕಗಳಲ್ಲಿ ಬಸವಣ್ಣ, ಕುವೆಂಪು ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಅಷ್ಟೇ ಅಲ್ಲದೆ, ಇರಬಹುದಾದ ಇತರ ಎಲ್ಲ ದೋಷಗಳನ್ನೂ ಸರಿಪಡಿಸಲು ನಿಷ್ಪಕ್ಷಪಾತ ಕ್ಷೇತ್ರತಜ್ಞರ ಒಂದು ಸಮಿತಿಯನ್ನು ನೇಮಿಸಬೇಕು. ಆ ಸಮಿತಿ ನಿರ್ದಿಷ್ಟ ಅವಧಿಯಲ್ಲಿ ಆ ಪುನರ್ ಪರಿಷ್ಕರಣ ಕಾರ್ಯವನ್ನು ಮಾಡಿ ಮುಗಿಸುವಂತೆ ಆದೇಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.