ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರು ಕುರಿಗಳಲ್ಲ, ನಾಡನ್ನಾಳಿದ ಸಿಂಹಗಳು: ನಿರ್ಮಲಾನಂದನಾಥ ಸ್ವಾಮೀಜಿ

‘ನಾಡಪ್ರಭು ಕೆಂಪೇಗೌಡ ಮತ್ತು ಒಕ್ಕಲಿಗ ರಾಜಮನೆತನದ ಇತಿಹಾಸ’: ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟನೆ
Last Updated 8 ಅಕ್ಟೋಬರ್ 2022, 13:15 IST
ಅಕ್ಷರ ಗಾತ್ರ

ಮೈಸೂರು:‘ತಲಕಾಡು ಗಂಗರು– ನಾವೆಲ್ಲವೂ‌ ಒಂದೇ. ಉಪ ಪಂಗಡಗಳು ಭೇದ ತೊರೆದು, ಆಡಳಿತದಲ್ಲಿ ಮುಂದೆ ಬರುವ ನಾಯಕರನ್ನು ಬೆಂಬಲಿಸಬೇಕು. ಒಕ್ಕಲಿಗರಿಗೆ ಅಧಿಕಾರ ಸಿಕ್ಕಾಗ ಎಲ್ಲ ಸಮಾಜದವರನ್ನೂ ಸಮಾನವಾಗಿ ನೋಡುತ್ತಾರೆ. ಸ್ವಾಭಿಮಾನವು ನಮ್ಮ ರಕ್ತದಲ್ಲಿಯೇ ಇರುವಂತಹ ಗುಣ’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಪಾದಿಸಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದಿಂದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ಮತ್ತು ಒಕ್ಕಲಿಗ ರಾಜಮನೆತನದ ಇತಿಹಾಸ’ ಕುರಿತ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಅವರು, ‘ಮಠದಿಂದ ಸಮಾಜದ 108 ಸಾಧಕರ ಪುಸ್ತಕಗಳನ್ನು ಹೊರತರಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 54 ಪುಸ್ತಕಗಳು ಹೊರಬಂದಿವೆ. ಇನ್ನೂ 54 ಮಂದಿಯ ಕುರಿತು ಪ್ರಕಟಿಸಲಾಗುವುದು. ಅವುಗಳನ್ನು ಮಕ್ಕಳಿಗೆ ಓದಿಸಬೇಕು. ಒಕ್ಕಲಿಗರು ಕುರಿಗಳಲ್ಲ, ನಾಡನ್ನಾಳಿದ ಸಿಂಹಗಳು ಎಂಬುದನ್ನು ತಿಳಿಸಿಕೊಡಬೇಕು’ ಎಂದು ಸಲಹೆ ನೀಡಿದರು.

‘ನಾಯಕತ್ವ ಗುಣ ಡಿಎನ್‌ಎನಲ್ಲೇ ಇದೆ’
‘ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲಾರರು. ಹೀಗಾಗಿ, ನಾವು ಸಮಾಜದ ಚರಿತ್ರೆ, ವಿಶೇಷತೆಗಳನ್ನು ತಿಳಿದುಕೊಳ್ಳಬೇಕು. ನಮ್ಮ ನಾಯಕರು ದೇಶ ಹಾಗೂ ರಾಜ್ಯವನ್ನು ಆಳಿದ್ದಾರೆ. ನಾಯಕತ್ವದ ಹಾಗೂ ಆಡಳಿತ ನಡೆಸುವ ಗುಣವು ನಮಗೆ ಪ್ರಜಾಪ್ರಭುತ್ವದ‌ ನಂತರ ಬಂದದ್ದಲ್ಲ; ಸಮಾಜದವರ ಡಿಎನ್‌ಎನಲ್ಲೇ ಅದು ಬಂದಿದೆ. ಹೀಗಾಗಿ ನಾಡನ್ನು ಆಳುವ ಹಂಬಲವನ್ನು ನಮ್ಮ ನಾಯಕರು ಆಗಾಗ ವ್ಯಕ್ತಪಡಿಸುತ್ತಾರೆ. ಅವರನ್ನು ನಾವು ಬೆಂಬಲಿಸಬೇಕು’ ಎಂದು ತಿಳಿಸಿದರು.

‘ಕೆಂಪೇಗೌಡರು ಹಾಗೂ ಗಂಗರಸರನ್ನು ಬೇರೆಯಾಗಿ ನೋಡಲಾಗದು; ಬೇರ್ಪಡಿಸಲೂ ಆಗದು. ಅದು ಗಡಿಗೆ‌ ಸೀಮಿತವಾದುದಲ್ಲ’ ಎಂದು ಹೇಳಿದರು.

‘ಕೆಂಪೇಗೌಡರ ಬಗ್ಗೆ ಹಾಗೂ ಒಕ್ಕಲಿಗರು ಎಂದು ಹೇಳಿಕೊಳ್ಳುವುದು ಹೆಮ್ಮೆಯೇ ಹೊರತು, ಅಹಂಕಾರವಲ್ಲ ಅಥವಾ ಬೇರೆ ಸಮಾಜವನ್ನು ಕಡೆಯಾಗಿ‌ ನೋಡುವುದೆಂದಲ್ಲ. ಸ್ವಾಭಿಮಾನ ಹಾಗೂ ಶಕ್ತಿಗಾಗಿ ನಮ್ಮ ಇತಿಹಾಸವನ್ನು ಯುವಜನರಿಗೆ ತಿಳಿಸಿಕೊಡಬೇಕು’ ಎಂದರು.

ವಿಚಾರಸಂಕಿರಣಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ,‘ರಾಜಧಾನಿ ಬೆಂಗಳೂರು ಬೆಳೆದಿದ್ದರೆ, ಸರ್ಕಾರವು ವರಮಾನ ಕಾಣುತ್ತಿದ್ದರೆ ಮತ್ತು ಅದನ್ನು ನಾಡಿಗೆ ಹಂಚುತ್ತಿದ್ದರೆ ಅದಕ್ಕೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಕಾರಣವಾಗಿದೆ’ ಎಂದುಸ್ಮರಿಸಿದರು.

‘ನಾಡಪ್ರಭು ಬೆಂಗಳೂರು ನಗರದ ನಿರ್ಮಾರ್ತೃಗಳು. ಸಮಾಜದ ರಣಭೈರೇಗೌಡ ಮತ್ತು ಕೆಂಪೇಗೌಡರ ವಂಶಸ್ಥರ ಕೊಡುಗೆ ಅನನ್ಯವಾದುದು. ಕೆಂಪೇಗೌಡರು ಬೆಂಗಳೂರನ್ನು ಕಟ್ಟದೆ ಇದ್ದಿದ್ದರೆ ರಾಜ್ಯ ಹೇಗಿರುತ್ತಿತ್ತು ಎನ್ನುವುದನ್ನು ಯೋಚಿಸಬೇಕು. ದೂರದೃಷ್ಟಿ ಹೊಂದಿದ್ದ ಅವರು ಸಾವಿರ ಕೆರೆಗಳನ್ನು ನಿರ್ಮಿಸಿದ್ದರು. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಅವುಗಳನ್ನು ಮುಚ್ಚಿದ್ದೇವೆ’ ಎಂದು ವಿಷಾದಿಸಿದರು.

ಕೆರೆಗಳನ್ನು ಉಳಿಸಿಕೊಳ್ಳಬೇಕಿತ್ತು:‘ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಕೆಂಪೇಗೌಡರು ಕಟ್ಟಿದ್ದ ಕೆರೆಗಳನ್ನು ಹಾಗೂ ರಾಜಕಾಲುವೆಗಳನ್ನು ಉಳಿಸಿಕೊಂಡಿದ್ದರೆ ಬೆಂಗಳೂರಿನಲ್ಲಿ ಸಮಸ್ಯೆಗಳೇ ಇರುತ್ತಿರಲಿಲ್ಲ’ ಎಂದರು.

‘ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ದಿಗ್ಗಜರಾದರೆ, ಧಾರ್ಮಿಕ ರಂಗದಲ್ಲಿ ಬಾಲಗಂಗಾಧರನಾಥ ಶ್ರೀಗಳ ಕೊಡುಗೆ ಅಪಾರ. ರಾಜಕೀಯದಲ್ಲಿ ಎಚ್.ಡಿ.ದೇವೇಗೌಡರು ಮೇರು ಸಾಧನೆ ಮಾಡಿದ್ದಾರೆ. ಒಕ್ಕಲಿಗರಾದ ನಾವು ದೇಶದಲ್ಲಿ‌ ನಮ್ಮದೇ ಆದ ಚಾಪನ್ನು ಮೂಡಿಸಿದ್ದೇವೆ. ನಮ್ಮ ಸಮಾಜವೂ ಉಳಿಯಬೇಕು; ತುಳಿತಕ್ಕೆ ಒಳಗಾಗಿರುವ ಸಮಾಜಗಳೂ ಉಳಿಯಬೇಕು.‌ ಈ ನಿಟ್ಟಿನಲ್ಲಿ ಯುವಪೀಳಿಗೆಗೆ ಸಮಾಜದ ಇತಿಹಾಸವನ್ನು ತಿಳಿಸಿಕೊಡಬೇಕು’ ಎಂದು ಸಲಹೆ ನೀಡಿದರು.

ಸಾಹಿತಿ ಡಾ.ಲತಾ ರಾಜಶೇಖರ್ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ.ಮಳಲಿ ವಸಂತ್‌ಕುಮಾರ್‌ ವಿರಚಿತ ‘ನಾಡಪ್ರಭು ಕೆಂಪೇಗೌಡ’ ಪುಸ್ತಕ ಬಿಡುಗಡೆ ಮಾಡಲಾಯಿತು.

ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದ ಗೌರವಾಧ್ಯಕ್ಷ ಸಿ.ಪಿ.ಕೃಷ್ಣಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ಕಾಂಗ್ರೆಸ್ ಮುಖಂಡ ಹರೀಶ್‌ ಗೌಡ, ಡಾ.ವಸಂತಕುಮಾರ್‌ ತಿಮಕಾಪುರ ಇದ್ದರು.

ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಎನ್.ಬೆಟ್ಟೇಗೌಡ ಸ್ವಾಗತಿಸಿದರು. ಗೌರವ ಸಲಹೆಗಾರ ಡಾ.ಬಿ.ಎನ್.ರವೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾ.ವೆಂಕಟೇಶ್ ನಿರೂಪಿಸಿದರು.

**

ಒಕ್ಕಲಿಗ ಸಮಾಜಕ್ಕೆ ಕೊಟ್ಟು ಅಭ್ಯಾಸವೇ‌ ಹೊರತು ತೆಗೆದುಕೊಂಡು ಗೊತ್ತಿಲ್ಲ. ಸ್ವಾಭಿಮಾನದ ಸಮಾಜ ನಮ್ಮದು.
–ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT