ಲಕ್ಷ್ಮಣರೇಖೆ ಮೀರುವಂತಿಲ್ಲ: ಸೌದಿ ಎಚ್ಚರಿಕೆ

ರಿಯಾದ್: ಪತ್ರಕರ್ತ ಜಮಾಲ್ ಖಶೋಗ್ಗಿ ಅವರು ಸೌದಿ ರಾಯಭಾರ ಕಚೇರಿಯಲ್ಲಿ ಹತ್ಯೆಯಾದ ಕುರಿತು ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ವಿರುದ್ಧ ಟೀಕೆ ವ್ಯಕ್ತವಾಗುತ್ತಿರುವುದರ ಬಗ್ಗೆ ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ.
‘ಸೌದಿ ಅರೇಬಿಯಾದಲ್ಲಿ ನಮ್ಮ ರಾಜಾಡಳಿತಕ್ಕೆ ಲಕ್ಷ್ಮಣರೇಖೆ ಇದೆ. ಅದನ್ನು ಮೀರಿ ಯಾರೂ ರಾಜಾಡಳಿತ ಕುರಿತು ಮಾತನಾಡುವಂತೆಯೂ ಇಲ್ಲ’ ಎಂದು ಸೌದಿ ವಿದೇಶಾಂಗ ಸಚಿವ ಅಡೆಲ್ ಅಲ್–ಜುಬಿಯರ್ ಪ್ರತಿಕ್ರಿಯಿಸಿದ್ದಾರೆ.
‘ರಾಜಾಡಳಿತ ಪ್ರತಿ ಪ್ರಜೆಯನ್ನು ಪ್ರತಿನಿಧಿಸುತ್ತದೆ ಮತ್ತು ಪ್ರತಿ ಪ್ರಜೆಯೂ ರಾಜಾಡಳಿತವನ್ನು ಪ್ರತಿನಿಧಿಸುತ್ತಾರೆ. ಈ ಕುರಿತು ಕ್ಷುಲ್ಲಕವಾದ ಚರ್ಚೆಗಳನ್ನು ಸಹಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಪ್ರಭಾವ ಕಡೆಗಣಿಸಿದ ಟ್ರಂಪ್: ಸೌದಿ ಅರೇಬಿಯಾದ ಜತೆಗಿನ ನಂಟು ಬೇರ್ಪಡಿಸಲಾಗದೆ ಇರುವಂತದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಆದರೆ ಟ್ರಂಪ್ ಅವರ ನಿಲುವಿನಿಂದಾಗಿ, ಸೌದಿ ಅರೇಬಿಯಾ ಮೇಲೆ ಅಮೆರಿಕ ಬೀರುವ ಪ್ರಭಾವವನ್ನು ಕಡೆಗಣಿಸಿದಂತಾಗಿದೆ ಎಂದು ಟೀಕಾಕಾರರು ಅಭಿಪ್ರಾಯಪಟ್ಟಿದ್ದಾರೆ.
‘ದಾಖಲೆ ಇದೆ’
ಇಸ್ತಾಂಬುಲ್ (ರಾಯಿಟರ್ಸ್): ಖಶೋಗ್ಗಿ ಅವರನ್ನು ‘ಮೌನವಾಗಿಸಬೇಕು’ ಎಂದು ಸೌದಿ ರಾಜ ಸೂಚನೆ ನೀಡಿರುವ ದೂರವಾಣಿ ಕರೆಯ ಧ್ವನಿಮುದ್ರಿಕೆ ಸಿಐಎ ಬಳಿ ಇದೆ ಎಂದು ಟರ್ಕಿಯ ಪತ್ರಿಕೆಯೊಂದು ವರದಿ ಮಾಡಿದೆ.
ಸಿಐಎ ನಿರ್ದೇಶಕಿ ಜಿನಾ ಹಾಸ್ಪೆಲ್ ಈ ಬಗ್ಗೆ ಕಳೆದ ತಿಂಗಳು ಟರ್ಕಿ ಅಧಿಕಾರಿಗಳಿಗೆ ಸೂಚ್ಯವಾಗಿ ತಿಳಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಕುರಿತು ತನಗೆ ಮಾಹಿತಿ ಇಲ್ಲ ಟರ್ಕಿಯ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.