ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಈಗ ಬಲವರ್ಧನೆ ಕಸರತ್ತು

Last Updated 3 ಫೆಬ್ರುವರಿ 2018, 6:36 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಇತರರಿಗಿಂತಲೂ ಮೊದಲೇ ಪಕ್ಷ ಸಂಘಟನೆಯನ್ನು ಆರಂಭಿಸಿದ್ದ ಬಿಜೆಪಿಯಲ್ಲಿ ಈಗ ಬಲವರ್ಧನೆಯ ಕಸರತ್ತು ಅನಿವಾರ್ಯವಾಗಿ ಆರಂಭವಾಗಿದೆ. ಬಿಟ್ಟುಹೋಗುವವರನ್ನು ಹಿಡಿದಿಟ್ಟುಕೊಳ್ಳುವುದರ ಜೊತೆಗೆ ಬಲಶಾಲಿಗಳನ್ನು ಬರಮಾಡಿಕೊಳ್ಳುವ ಪ್ರಯತ್ನಕ್ಕೆ ಪಕ್ಷ ಕೈಹಾಕಿದೆ.

2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ಏಕೈಕ ಶಾಸಕರಾಗಿದ್ದ, ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ಸಿಂಗ್‌ ಕಾಂಗ್ರೆಸ್‌ ಸೇರ್ಪಡೆಯಿಂದ ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.

ಆ ಚುನಾವಣೆಯಲ್ಲಿ ಕಾಂಗ್ರೆಸ್‌ 5 ಸ್ಥಾನ ಗಳಿಸಿತ್ತು. ಜೆಡಿಎಸ್‌ 1, ಬಿಎಸ್‌ಆರ್‌ ಕಾಂಗ್ರೆಸ್‌ 1 ಮತ್ತು ಸ್ವತಂತ್ರ ಅಭ್ಯರ್ಥಿ 1 ಸ್ಥಾನ ಗಳಿಸಿದ್ದರು. ಜೆಡಿಎಸ್‌ನ ಎಸ್‌.ಭೀಮಾನಾಯ್ಕ ಅವರನ್ನೂ ಕಾಂಗ್ರೆಸ್‌ ತನ್ನತ್ತ ಈ ಮೊದಲೇ ಸೆಳೆದುಕೊಂಡಿದೆ. ಬಿಎಸ್‌ಆರ್‌ನಿಂದ ಗೆದ್ದಿದ್ದ ಕಂಪ್ಲಿ ಶಾಸಕ ಟಿ.ಎಚ್‌.ಸುರೇಶ್‌ಬಾಬು ಬಿಜೆಪಿಯೊಂದಿಗೆ ಮುಂದುವರಿದಿದ್ದಾರೆ. ನಾಗೇಂದ್ರ ಮಾತ್ರ ದೂರ ಉಳಿದಿದ್ದಾರೆ.

ಬದಲಾದ ಸನ್ನಿವೇಶದಲ್ಲಿ, ಆನಂದ್‌ಸಿಂಗ್‌ ಪ್ರಚಾರದಲ್ಲಿ ಬಿಜೆಪಿ ಕಾಣೆಯಾಗಿ ಕಾಂಗ್ರೆಸ್‌ ಚಿಹ್ನೆ ರಾರಾಜಿಸುತ್ತಿದೆ. ಇದು ಪಕ್ಷದ ಸಾಮಾನ್ಯ ಕಾರ್ಯಕರ್ತರು, ಮುಖಂಡರಲ್ಲಷ್ಟೇ ಅಲ್ಲದೆ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾದ ಸಂಸದ ಬಿ.ಶ್ರೀರಾಮುಲು ಅವರಲ್ಲೂ ಹತಾಶೆ, ಅಸಮಾಧಾನವನ್ನು ಹುಟ್ಟುಹಾಕಿದೆ.

ಗುರುವಾರ ನಗರದ ತಮ್ಮ ಮನೆಯಲ್ಲಿ ನಡೆಸಿದ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಅವರು, ಆನಂದ್‌ಸಿಂಗ್‌ ಅವರನ್ನು ಸೆಳೆದುಕೊಂಡ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಕಾಂಗ್ರೆಸ್‌ನಲ್ಲಿ ಸ್ಪರ್ಧಿಸುವ ಗಂಡಸರೇ ಇಲ್ಲವೇ’ ಎಂದು ಕೇಳುವ ಮಟ್ಟಿಗೆ ಅವರ ಅಸಮಾಧಾನ ಭುಗಿಲೆದ್ದಿದೆ.

ನಾಗೇಂದ್ರ ನಾಪತ್ತೆ: ಕೂಡ್ಲಿಗಿ ಕ್ಷೇತ್ರದಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾದಂದಿನಿಂದ ಬಿಜೆಪಿಯೊಂದಿಗೇ ಗುರುತಿಸಿಕೊಂಡಿದ್ದ ನಾಗೇಂದ್ರ ಅವರು ದೂರ ಉಳಿದಿರುವುದು ಕೂಡ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.

‘ಪಕ್ಷದ ಮುಖಂಡರಲ್ಲಿ ಯಾರೂ ನನ್ನ ಅಸಮಾಧಾನವನ್ನು ಬಗೆಹರಿಸಲು ಯತ್ನಿಸಿಲ್ಲ. ಅಸಮಾಧಾನ ಶಮನಗೊಂಡ ಬಳಿಕ ಪರಿವರ್ತನಾ ಯಾತ್ರೆ ನಡೆಸುವಂತೆ ಹೇಳಿದರೂ ಕೇಳಲಿಲ್ಲ’ ಎಂದು ಅವರು ಜಿಲ್ಲೆಯ ಹೊರಗೆ ಅನಂತಪುರದ ಮಠವೊಂದರಲ್ಲಿ ಇತ್ತೀಚೆಗೆ ನಡೆಸಿದ್ದ ಸಭೆಯಲ್ಲಿ ಅಸಮಾಧಾನ ತೋಡಿಕೊಂಡಿದ್ದರು.

ಈಗಲೂ ಅವರನ್ನು ಸಂಪರ್ಕಿಸುವ ಬಿಜೆಪಿ ಯತ್ನ ಜಾರಿಯಲ್ಲಿದೆ. ಆದರೆ ಅವರು ‘ಕ್ಷೇತ್ರದ ಜನರ ಹಿತಕ್ಕೆ’ ಅನುಗುಣವಾದ ನಿರ್ಧಾರ ಕೈಗೊಳ್ಳುವತ್ತ ಗಮನ ಹರಿಸಿದ್ದಾರೆ. ಅತ್ಯಾಪ್ತರಿಗಷ್ಟೇ ಅವರು ಸಂಪರ್ಕಕ್ಕೆ ಲಭ್ಯವಿರುವುದರಿಂದ ಅವರ ನಡೆ ನಿಗೂಢವಾಗಿದೆ.

‘ಅವರು ಬಯಸಿದರೆ ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಗುವುದು’ ಎಂಬ ಸಂಸದರ ಭರವಸೆಯ ಹೇಳಿಕೆಗೂ ಅವರ ಮೌನವೇ ಉತ್ತರವಾದಂತಿದೆ.

ಗ್ರಾಮೀಣ: ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ತಮಗೆ ಅವಕಾಶ ದೊರಕದಿದ್ದರೆ ರಾಯಚೂರು ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಅವರಿಗೆ ಅವಕಾಶ ದೊರಕಿಸಲಾಗುವುದು ಎಂದು ಶ್ರೀರಾಮುಲು ಸಭೆಯಲ್ಲಿ ಹೇಳಿರುವುದು ಚರ್ಚೆಗೆ ದಾರಿ ಮಾಡಿದೆ.

ಕಾರ್ತಿಕ್‌ ಘೋರ್ಪಡೆ ಬಲ ತರುವರೇ?

ಸಂಡೂರಿನಲ್ಲಿ ಆರಂಭದಿಂದಲೂ ಕಾಂಗ್ರೆಸ್‌ ಜೊತೆಗೆ ನೆಂಟಸ್ತಿಕೆಯನ್ನು ಉಳಿಸಿಕೊಂಡಿರುವ ಘೋರ್ಪಡೆ ಕುಟುಂಬದ ಗಣಿ ಉದ್ಯಮಿ ಕಾರ್ತಿಕೇಯ ಘೋರ್ಪಡೆ ಅವರು ಬಿಜೆಪಿ ಸೇರಲಿದ್ದಾರೆ.

2004ರ ಚುನಾವಣೆಯಲ್ಲಿ ತಮ್ಮ ಚಿಕ್ಕಪ್ಪ ವೆಂಕಟರಾವ್‌ ಘೋರ್ಪಡೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಸಂದರ್ಭದಲ್ಲೇ ಕಾರ್ತಿಕೇಯ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಅದಕ್ಕೂ ಮುಂಚೆ ಅವರು ಸಂಡೂರು ಪಟ್ಟಣ ಪಂಚಾಯಿತಿ ನಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.

ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಸಂಡೂರು ಕ್ಷೇತ್ರದಲ್ಲಿ ಕಾರ್ತಿಕೇಯ ಅವರಿಗೆ ಸ್ಪರ್ಧಿಸಲು ಅವಕಾಶವಿಲ್ಲ. ಆದರೆ ಅಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಅವರು ಪ್ರಚಾರ ನಡೆಸಲಿದ್ದಾರೆ. ‘ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬರುತ್ತದೆ’ ಎಂದು ಸಂಸದರು ಅವರ ಮನೆಯಲ್ಲೇ ಇತ್ತೀಚೆಗೆ ಸಭೆ ನಡೆಸಿ ಹೇಳಿದ್ದರು. ಅವರು ಪಕ್ಷಕ್ಕೆ ಹೇಗೆ ಬಲ ತರಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.

* * 

ಹೊಸಪೇಟೆ ಮತ್ತು ಕೂಡ್ಲಿಗಿ ಕ್ಷೇತ್ರದಲ್ಲಿ ನಮಗೆ ಸಮಸ್ಯೆ ಏನಿಲ್ಲ. ಅಲ್ಲಿ ಪಕ್ಷದಿಂದ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿಗಳಿದ್ದಾರೆ
ಪಿ.ಚೆನ್ನಬಸವನಗೌಡ
ಬಿಜೆಪಿ ಜಿಲ್ಲಾ ಘಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT