ಮೈಸೂರು: ಕರ್ನಾಟಕ ಈಜು ಸಂಸ್ಥೆ ಮತ್ತು ಮೈಸೂರು ಜಿಲ್ಲಾ ಈಜು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಮೇ 31ರಿಂದ ಜೂನ್ 3ರ ವರೆಗೆ ನಗರದಲ್ಲಿ ರಾಜ್ಯ ಜೂನಿಯರ್ ಹಾಗೂ ಸಬ್ಜೂನಿಯರ್ ಈಜು ಚಾಂಪಿಯನ್ಷಿಪ್ ನಡೆಯಲಿದೆ.
ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ನಡೆಯಲಿರುವ ಕೂಟದಲ್ಲಿ ರಾಜ್ಯದ ವಿವಿಧ ಭಾಗಗಳ 650 ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಹಲವು ಸ್ಪರ್ಧಿಗಳು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಎಂದಿನಂತೆ ಈ ಬಾರಿಯೂ ಬೆಂಗಳೂರಿನ ಈಜು ಕ್ಲಬ್ಗಳು ಪಾರಮ್ಯ ಮೆರೆಯುವ ಸಾಧ್ಯತೆಯಿದೆ.
ಶ್ರೀಹರಿ ನಟರಾಜ್, ವೈಭವ್ ಆರ್. ಶೇಟ್, ತನಿಷ್ ಜಿ.ಮ್ಯಾಥ್ಯೂ, ಪ್ರಸಿದ್ಧ ಕೃಷ್ಣ, ಖುಷಿ ದಿನೇಶ್, ಮಯೂರಿ ಲಿಂಗರಾಜ್, ಸುಮನಾ ಸಿ.ಭಾಸ್ಕರ್, ಬಿ.ಜೆ.ಮಧುರಾ, ಎಂ.ಧ್ಯಾನ್, ನೀನಾ ವೆಂಕಟೇಶ್ ಅವರು ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ.
‘ವಿ.ವಿ ಈಜುಕೊಳ ನವೀಕರಣ ಗೊಂಡ ಬಳಿಕ ನಡೆಯಲಿರುವ ಪ್ರಮುಖ ಚಾಂಪಿಯನ್ಷಿಪ್ ಇದಾಗಿದೆ. ಮೈಸೂರಿನಲ್ಲಿ ಮೂರನೇ ಬಾರಿಗೆ ಸಬ್ ಜೂನಿಯರ್, ಜೂನಿಯರ್ ಈಜು ಚಾಂಪಿಯನ್ಷಿಪ್ ಆಯೋಜಿಸಲು ಸಕಲ ಸಿದ್ಧತೆ ನಡೆಸಿದ್ದೇವೆ’ ಎಂದು ಮೈಸೂರು ಜಿಲ್ಲಾ ಈಜು ಸಂಸ್ಥೆಯ ಕಾರ್ಯದರ್ಶಿ ಎಂ.ಪಿ. ನಾಭಿರಾಜ್ ತಿಳಿಸಿದರು.