ವ್ಯವಸ್ಥೆಯ ವಿರುದ್ಧ, ರಾಜಕೀಯ ನಿಯಂತ್ರಣಗಳ ವಿರುದ್ಧ ಕಟು ಪ್ರಶ್ನೆಗಳನ್ನೆತ್ತುತ್ತಾ, ನೋಡುಗರು ರಂಗಾನುಭವದಲ್ಲಿ ತೀರಾ ತನ್ಮಯವಾಗಿ ಕಳೆದು ಹೋಗದೆ, ವಿಚಾರವಂತರಾಗಿರಲು ರಂಗಪ್ರಯೋಗ ಹಾಗೂ ನಟನೆ ಸದಾ ಪ್ರಯತ್ನಿಸುತ್ತಿರಬೇಕೆಂದು ಬ್ರೆಕ್ಟ್ ಒತ್ತಿ ಹೇಳಿದ. ‘ತ್ರೀ ಪೆನ್ನಿ ಅಪೇರ’, ‘ಕಕೇಷಿಯನ್ ಚಾಕ್ ಸರ್ಕಲ್’, ‘ಮದರ್ ಕರೇಜ್’, ‘ಗೆಲಿಲಿಯೋ’ ಮುಂತಾದ ಮಹತ್ವದ ನಾಟಕಗಳನ್ನು ಬರೆದ ಬ್ರೆಕ್ಟ್ ನಾಟಕ ನಿರ್ದೇಶಕನೂ ಆಗಿದ್ದ. ಜಾಗೃತ ಪ್ರಜ್ಞೆಯ, ತೀಕ್ಷ್ಣ ಗ್ರಹಿಕೆಗಳ ಕವಿಯೂ ಆಗಿದ್ದ.