ರಾಜಧಾನಿ ನಗರದ ಎಲ್ಲೆಡೆ ತ್ರಿವರ್ಣಧ್ವಜದ ಹಾರಾಟ ನೋಡಲು ಇನ್ನೇನು ಎರಡು ದಿನ ಮಾತ್ರ ಬಾಕಿ ಇದೆ. ಆಚರಣೆ ಮುಗಿದ ಮೇಲೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ರಿವರ್ಣ ಧ್ವಜಗಳನ್ನು ಬಿಸಾಡುತ್ತಾರೆ. ಆಹಾರ ಉತ್ಸವ, ಹಾಡು, ಸಂಗೀತ ಕಾರ್ಯಕ್ರಮಗಳಲ್ಲೂ ಪ್ಲಾಸ್ಟಿಕ್ ಹಾಗೂ ಕಸದ್ದೇ ಹಾವಳಿ.
ತ್ಯಾಗ, ಬಲಿದಾನ ನೆನೆಯುವ ಜನರು ಸ್ವಚ್ಛತೆ ಮರೆಯುತ್ತಾರೆ. ಬೀದಿಯಲ್ಲಿ ಮಾರುವ ತ್ರಿವರ್ಣ ಧ್ವಜ ಕೊಂಡು ಬೈಕ್, ಕಾರ್ಗಳಿಗೆ ಕಟ್ಟಿಕೊಂಡು ಓಡಾಡುವರ ಸಂಖ್ಯೆ ಹೆಚ್ಚಿದೆ. ಅಂಗಡಿ ಮುಂಗಟ್ಟುಗಳ ಮುಂದೆಯೂ ಕಟ್ಟಿದ ಧ್ವಜ ಹರಿದು ಬಿದ್ದರೂ ಕೇಳುವವರಿಲ್ಲ.
ಅಂತಹ ಬಾವುಟಗಳನ್ನು ಹುಡುಕಿ ಒಂದೆಡೆ ಸೇರಿಸುವ ಕೆಲಸವನ್ನು ನಗರದ ಕಿಶೋರ್ ಪಟವರ್ಧನ್ ಮಾಡುತ್ತಾರೆ. ಅವರು ತಮ್ಮ ‘ಫ್ಲಾಗ್ಥಾನ್’ ಮೂಲಕ ಹತ್ತಾರು ಸ್ನೇಹಿತರೊಟ್ಟಿಗೆ ಎಲ್ಲೆಂದರಲ್ಲಿ ಬಿದ್ದ ಬಾವುಟಗಳನ್ನು ಹುಡುಕುವ ಕೆಲಸ ಮಾಡುತ್ತಾರೆ.
ಆಗಸ್ಟ್ 15ರಂದು ಮಧ್ಯಾಹ್ನ 3 ಗಂಟೆಗೆ ಕಬ್ಬನ್ ಪಾರ್ಕ್ ಬಳಿ ಸೇರಿಕೊಳ್ಳಲಿರುವ ಅವರು, ಮೂರರಿಂದ ನಾಲ್ಕು ತಂಡಗಳಾಗಿ ಬಾವುಟಗಳನ್ನು ಹುಡುಕಲು ಹೊರಡಲಿದ್ದಾರೆ. ಮತ್ತೆ ಧ್ವಜಗಳ ಸಮೇತ ಕಬ್ಬನ್ ಪಾರ್ಕ್ನಲ್ಲಿ ಸೇರುತ್ತಾರೆ. ಮೂರು ವರ್ಷಗಳಿಂದ ಈ ತಂಡಕ್ಕೆ 500ಕ್ಕೂ ಹೆಚ್ಚು ಧ್ವಜ ಸಿಕ್ಕಿವೆ.
‘ಕ್ರಮೇಣ ಈ ಸಂಖ್ಯೆ ಕಡಿಮೆಯಾಗುತ್ತಿದೆ. ಸೊನ್ನೆಗೆ ಬರುವವರೆಗೂ ನಮ್ಮ ಪ್ರಯತ್ನ ಮುಂದುವರಿಯುತ್ತದೆ’ ಎನ್ನುತ್ತಾರೆ ಕಿಶೋರ್. ಈ ತಂಡದೊಂದಿಗೆ ಎಲ್ಲರೂ ಕೈ ಜೋಡಿಸಬಹುದು. ಸಂಪರ್ಕ: 9980218814