ಉಡುಪಿ: ‘ಸಂಕಷ್ಟ ಪರಿಹಾರ ಸೂತ್ರ ರಚನೆಯಾಗದಿರುವುದೇ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಗೊಂದಲಗಳಾಗಲು ಹಾಗೂ ರಾಜ್ಯಕ್ಕೆ ಹಿನ್ನಡೆ ಆಗಲು ಕಾರಣ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ನೀರನ್ನು ಯಾವ ರೀತಿ ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದೇ ಕಾರಣಕ್ಕೆ ತಮಿಳುನಾಡು ಆಗಾಗ್ಗೆ ಕ್ಯಾತೆ ತೆಗೆಯುತ್ತಿದೆ. ಸದ್ಯ ಕುಡಿಯುವ ನೀರಿನ ಬಳಕೆಗೆ ಸಾಕಾಗುವಷ್ಟು ಮಾತ್ರ ನೀರು ಜಲಾಶಯಗಳಲ್ಲಿದೆ.
ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದು ಎಂಬ ನಿಯಮ ಇದ್ದರೂ, ತಮಿಳುನಾಡು ನೀರು ಬಿಡುವಂತೆ ಒತ್ತಾಯ ಮಾಡುತ್ತಿದೆ. ನ್ಯಾಯಾಲಯದ ಪ್ರಕ್ರಿಯೆಗಳು ವೇಗ ಪಡೆದುಕೊಂಡರೆ ಮತ್ತು ಸಂಕಷ್ಟ ಪರಿಹಾರ ಸೂತ್ರವನ್ನು ನ್ಯಾಯಾಲಯ ನಿಗದಿ ಮಾಡಿದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.