ಕಾವೇರಿ ಜಲ ವಿವಾದದ ವಿಷಯದಲ್ಲಿ ಸರ್ಕಾರ ಎಡವಿತೆಂದು ವಿರೋಧ ಪಕ್ಷದ ನಾಯಕರು ದೂರಿದ್ದಾರೆ. ವಿವಾದದಿಂದ ಉಂಟಾದ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ಕರೆದಿದ್ದ ಸಭೆಯಲ್ಲಿ ಇವರೆಲ್ಲ ಚರ್ಚಿಸಿದ್ದಾದರೂ ಏನು? ಸರ್ಕಾರ ಎಡವುತ್ತಿದೆ ಎಂದಾದರೆ ಅದನ್ನು ಅಲ್ಲಿಯೇ ತಿಳಿಸಿ ನಾಡಿಗೆ ಒಳ್ಳೆಯದಾಗುವಂತೆ ಮಾಡಬಹುದಿತ್ತಲ್ಲ.
ವಿರೋಧ ಪಕ್ಷದ ನಾಯಕರು ತಮ್ಮ ಪಕ್ಷದ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ವಿವಾದವನ್ನು ಯಾವ ರೀತಿ ನಿರ್ವಹಿಸಿದರೆಂಬುದನ್ನು ಮರೆತಂತಿದೆ. ಎಲ್ಲಾ ಪಕ್ಷಗಳ ಹಾಲಿ, ಮಾಜಿ ನಾಯಕರು ಕಾವೇರಿ, ಕೃಷ್ಣೆ, ಮಹಾದಾಯಿ ವಿವಾದಗಳನ್ನು ನಿರ್ವಹಿಸಿದ ಪರಿಯನ್ನು ಮೂರು ದಶಕಗಳಿಂದ ನೋಡುತ್ತಾ ಬಂದಿರುವ, ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳದೆ, ಗುಣವಂತರೆನಿಸಿಕೊಂಡವರಿಗೆ ವೋಟು ಮಾಡುತ್ತಾ ಬದುಕುತ್ತಿರುವ ನನ್ನಂಥವರಿಗೆ ನಮ್ಮ ನೇತಾರರು ಇರುವುದು ರಾಜ್ಯದ ಜನತೆಗೋ ಅಥವಾ ಅವರು ಪ್ರತಿನಿಧಿಸುವ ಪಕ್ಷಕ್ಕೋ ಎಂಬುದು ತಿಳಿಯುತ್ತಿಲ್ಲ.
ಹೊಲಸು ರಾಜಕೀಯದ ನಡುವೆ, ನಾಗರಿಕ ಸಮಾಜವನ್ನು ಮುನ್ನಡೆಸಲು ಒಂದಿಷ್ಟು ಒಳ್ಳೆಯದನ್ನು ಮಾಡಲು ಪ್ರಯತ್ನಿಸಿದೆವು ಎಂದು ಹೇಳಿಕೊಳ್ಳಲಿಕ್ಕಾದರೂ ಜನಪ್ರತಿನಿಧಿಗಳು ಪ್ರಯತ್ನಿಸಲಿ.
– ಗಿರೀಶ್ ಜಾರನಪಾಳ್ಯ,
ಮೈಸೂರು