ಸಂಸತ್ ಆವರಣದಲ್ಲಿ ಮೌನ ಪ್ರತಿಭಟನೆ

ನವದೆಹಲಿ: ಕಾವೇರಿ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೆ. 20ರಂದು ರಾಜೀನಾಮೆ ಪತ್ರ ಸಲ್ಲಿಸಿದ್ದ ಮಂಡ್ಯದ ಸಂಸದ, ಜೆಡಿಎಸ್ನ ಸಿ.ಎಸ್. ಪುಟ್ಟರಾಜು, ಗುರುವಾರ ಲೋಕಸಭೆಗೆ ತೆರಳಿ ರಾಜೀನಾಮೆ ಸಲ್ಲಿಸಲು ಮುಂದಾದರು. ಆದರೆ, ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ವಿದೇಶಕ್ಕೆ ತೆರಳಿದ್ದರಿಂದ ರಾಜೀನಾಮೆ ಸಲ್ಲಿಸಲಾಗದೆ ಮರಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾವೇರಿ ಸಮಸ್ಯೆ ನಿವಾರಣೆಗಾಗಿ ಮಧ್ಯಸ್್ಥಿಕೆ ವಹಿಸಬೇಕು ಎಂದು ಆಗ್ರಹಿಸಿ ಸಂಸತ್ ಭವನದ ಆವರಣದಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಅವರು ಈ ವೇಳೆ ಮೌನ ಪ್ರತಿಭಟನೆ ನಡೆಸಿದರು.
‘ನನ್ನನ್ನು ಆಯ್ಕೆ ಮಾಡಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಜನರಿಗೆ ಕುಡಿಯಲು ನೀರು ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಜನರ ಹಿತ ಕಾಪಾಡುವುದು ಅಸಾಧ್ಯವಾಗಿದ್ದರಿಂದ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾವೇರಿ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ದನಿ ಎತ್ತುವ ಮೂಲಕ ಮಂಡ್ಯದ ಎಲ್ಲ ಜಲಪ್ರತಿನಿಧಿಗಳೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗ ಬೇಕು ಎಂದ ಅವರು, ಸುಪ್ರೀಂ ಕೋರ್ಟ್ ತೀರ್ಪಿನಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ವಿರೋಧ ಪಕ್ಷವಾಗಿ ರುವ ಬಿಜೆಪಿ ಬೆಂಬಲ ನೀಡದಿದ್ದರೂ, ಕಾವೇರಿ ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.