ಮಂಡ್ಯ: ಜಿಲ್ಲೆಯ ಕೆಆರ್ಎಸ್ ಅಣೆಕಟ್ಟೆಯಿಂದ 6,800 ಕ್ಯುಸೆಕ್ ನೀರನ್ನು ಸೋಮವಾರ ರಾತ್ರಿ 9ರಿಂದ ಹೊರ ಬಿಡಲು ಆರಂಭಿಸಲಾಗಿದ್ದು, ಅದರಲ್ಲಿ 3 ಸಾವಿರ ಕ್ಯುಸೆಕ್ ನಷ್ಟು ನೀರು ತಮಿಳುನಾಡಿಗೂ ಹರಿದು ಹೋಗಲಿದೆ.
ಅಣೆಕಟ್ಟೆಯ ನಾಲೆಗಳಿಗೆ 2,800 ಕ್ಯುಸೆಕ್ ಹಾಗೂ ನದಿಗೆ 4 ಸಾವಿರ ಕ್ಯುಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ನದಿಗೆ ಬಿಟ್ಟಿರುವ 4 ಸಾವಿರ ಕ್ಯುಸೆಕ್ ನೀರಿನಲ್ಲಿ ಒಂದು ಸಾವಿರ ಕ್ಯುಸೆಕ್ನಷ್ಟು ನೀರು ನದಿಯ ನಾಲೆಗಳಿಗೆ ಹರಿದರೆ, ಉಳಿದ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ.
ವಿಶ್ವೇಶ್ವರಯ್ಯ ಸೇರಿದಂತೆ ವಿವಿಧ ನಾಲೆಗಳಿಗೆ ಬಿಟ್ಟಿರುವ ನೀರಿನಲ್ಲಿಯೂ ಗದ್ದೆಗಳಿಂದ ಸೋರಿಕೆಯಾಗಿ ಹಳ್ಳಗಳ ಮೂಲಕ ನದಿಗೆ ಒಂದಷ್ಟು ನೀರೂ ಸೇರಲಿದೆ ಎನ್ನುತ್ತವೆ ವಿಶ್ವಸನೀಯ ಮೂಲಗಳು.
ಹಾರಂಗಿಯಿಂದ ನೀರು ಬಿಡುಗಡೆ: ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಿಂದ ಸೋಮವಾರ ರಾತ್ರಿ 10.15ರಿಂದ ನದಿಗೆ 4,000 ಕ್ಯುಸೆಕ್ ಹಾಗೂ ನಾಲೆಗಳಿಗೆ 1,500 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಯಿತು.