ಚೆನೈ : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತನಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ತಮಿಳುನಾಡು ಸರ್ಕಾರ, ಈ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನೀರು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದೆ.
‘ಮಂಡಳಿ ರಚನೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದೂ ತಮಿಳುನಾಡು ಒತ್ತಾಯಿಸಿದೆ.
ಆದೇಶದಲ್ಲಿ ಮಾರ್ಪಾಡನ್ನು ಕೋರಿ ಕೇಂದ್ರ ಸಲ್ಲಿಸಿರುವ ಅರ್ಜಿ ಹಿಂದೆ ಸರ್ಕಾರ ನ್ಯಾಯಾಲಯಕ್ಕೆ ಕೊಟ್ಟಿರುವ ಭರವಸೆಗೆ ವಿರುದ್ಧವಾಗಿದೆ’ ಎಂದು ತಮಿಳುನಾಡು ವಾದಿಸಿದೆ.
‘ಕೇಂದ್ರ ತನ್ನ ನಿಲುವಿನಲ್ಲಿ ದೀಢಿರ್ ಬದಲಾವಣೆ ಮಾಡಿರುವುದರ ಹಿಂದಿನ ಕಾರಣ ಅರ್ಥವಾಗುತ್ತಿಲ್ಲ. ಪರಿಸ್ಥಿತಿ ಅರಿತು ಕೇಂದ್ರ ಮಧ್ಯಂತರ ಅರ್ಜಿಯನ್ನು ಹಿಂತೆಗೆದುಕೊಂಡು ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಿ ತಮಿಳುನಾಡಿಗೆ ನ್ಯಾಯ ಕೋಡಬೇಕು’ ಎಂದು ತಮಿಳುನಾಡಿನ ಪ್ರಧಾನ ಕಾರ್ಯದರ್ಶಿ ಪಿ. ರಾಮಾ ಮೋಹನ್ ರಾವ್ ಹೇಳಿದ್ದಾರೆ.
ಹಲವೆಡೆ ಹೋರಾಟ– ಬಂಧನ: ಕಾವೇರಿ ನಿರ್ವಹಣಾ ಮಂಡಳಿ ರಚನೆಯ ವಿಷಯದಲ್ಲಿ ನಿಲುವು ಬದಲಿಸಿದ ಕೇಂದ್ರದ ನಡೆಯನ್ನು ವಿರೋಧಿಸಿ ತಮಿಳುನಾಡಿನ ಹಲವೆಡೆ ಮಂಗಳವಾರ ಪ್ರತಿಭಟನೆ ನಡೆದಿದೆ. ಹೋರಾಟ ನಡೆಸಿದ ಕಾವೇರಿ ನದಿ ಪಾತ್ರದ ಅನೇಕ ರೈತರನ್ನು ಬಂಧಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಲು ಮುಂದಾದ ತಂಜಾವೂರ್ ಜಿಲ್ಲೆಯ ಸುಮಾರು 50 ರೈತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದೆ. ತಿರುಚ್ಚಿ ಜಿಲ್ಲೆಯಲ್ಲಿ ಅರೆಬೆತ್ತಲೆಯಾಗಿ ರಸ್ತೆಯ ಮೇಲೆ ಉರುಳಾಡಲು ಪ್ರಯತ್ನಿಸಿದ ರೈತರನ್ನು ಬಂಧಿಸಲಾಗಿದೆ.