ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್‌ ಎಂ.ವಿ. ಬಾಲ್ಯ ನೆನಪಿಸುವ ‘ವಿಶ್ವಕುಟೀರ’

ಸುತ್ತಾಣ
Last Updated 21 ನವೆಂಬರ್ 2017, 14:47 IST
ಅಕ್ಷರ ಗಾತ್ರ

ಎಂಜಿನಿಯರ್‌ ಎಂದರೆ ಥಟ್ಟನೆ ನೆನಪಾಗುವುದು ಸರ್‌ ಎಂ.ವಿಶ್ವೇಶ್ವರಯ್ಯ ಅವರ ಹೆಸರು. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಅವರು ‘ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಕೃಷ್ಣರಾಜ ಸಾಗರ  ಅಣೆಕಟ್ಟು, ಭದ್ರಾವತಿ ಕಬ್ಬಿಣ ಕಾರ್ಖಾನೆ ಸೇರಿದಂತೆ ಅನೇಕ ಮೌಲಿಕ ಸಂಸ್ಥೆಗಳನ್ನು ಕಟ್ಟಿದವರು.

ಸಾಧನೆಗಳ ಹರಿಕಾರ ವಿಶ್ವೇಶ್ವರಯ್ಯ ಹುಟ್ಟೂರು ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ. ಇದು ರಾಜಧಾನಿಗೆ ಹತ್ತಿರದಲ್ಲಿಯೇ ಇದೆ. ಈ ಗ್ರಾಮಕ್ಕೆ ಭೇಟಿ ನೀಡಿದಾಗ ಆದರ್ಶ ಗ್ರಾಮದ ಕನಸು ಕಣ್ತುಂಬುತ್ತದೆ.

ವಿಶ್ವಕುಟೀರ
ವಿಶ್ವೇಶ್ವರಯ್ಯ ಅವರು ಹುಟ್ಟಿದ, ತಮ್ಮ ಬಾಲ್ಯದ ದಿನಗಳನ್ನು ಕಳೆದ ಹೆಂಚಿನ ಮನೆಯು ಸುಂದರ ತಾಣದಂತಿದೆ. ಅದಕ್ಕೆ ‘ವಿಶ್ವಕುಟೀರ’ ಎಂಬ ಹೆಸರಿಡಲಾಗಿದೆ. ಮನೆಯ ಸುತ್ತ ಒಂದು ಒಂದು ಸುತ್ತು ಹಾಕಿದರೆ ಮನೆಗೆ ಹೊಂದಿಕೊಂಡ ಬಾವಿಯೂ ಕಾಣಸಿಗುತ್ತದೆ.ಮನೆಯ ಮಹಡಿಯಲ್ಲಿ ವಿಶ್ವೇಶ್ವರಯ್ಯ ಅವರೇ ಸ್ಥಾಪಿಸಿದ್ದ ‘ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು’ ಶಾಖೆ ಇದೆ.

ವಿಶ್ವೇಶ್ವರಯ್ಯ ಮ್ಯೂಸಿಯಂ
ಮ್ಯೂಸಿಯಂನಲ್ಲಿ ವಿಶ್ವೇಶ್ವರಯ್ಯ ಅವರು ಉಪಯೋಗಿಸಿದ ವಸ್ತುಗಳ ಸಂಗ್ರಹವಿದೆ. ಜತೆಗೆ ರಾಜ ಮನೆತನ ಮತ್ತು ಸಂಸ್ಥಾನಗಳು ನೀಡಿರುವ ದಂತ ಕಲಾಕೃತಿಗಳು ಹಾಗೂ ಬೆಳ್ಳಿಯ ಹಲವು ಪಾರಿತೋಷಕಗಳು ಇವೆ. ಅವರೇ ನಿರ್ಮಿಸಿದ ಅನೇಕ ಸಿವಿಲ್‌ ಮಾದರಿಗಳನ್ನು ನಾವಿಲ್ಲಿ ಕಾಣಬಹುದು.

1920ರ ದಶಕದಲ್ಲಿ ಸರ್‌.ಎಂ.ವಿ ಅವರು ಬಳಸಿದ ಬ್ಯಾಂಕಿನ ಪಾಸ್‌ ಪುಸ್ತಕ, ಅವರ ಕಚೇರಿಯಲ್ಲಿ ಉಪಯೋಗಿಸಿದ ಪೇಪರ್‌ ಕ್ಲೀಪ್‌, ಇಂಕ್ ಬಾಟಲಿ, ಪೆನ್‌ಗಳು, ಕಣ್ಣುಗಳನ್ನು ಶುಚಿಗೊಳಿಸಲು ಬಳಸುತ್ತಿದ್ದ ಗಾಜಿನ ಸಲಕರಣೆಗಳು ಗಮನ ಸೆಳೆಯುತ್ತವೆ.

ವಿಶ್ವೇಶ್ವರಯ್ಯ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರೆತ ಸುದ್ದಿ ಪ್ರಕಟಸಿದ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್’ ಪತ್ರಿಕೆಯ ಪ್ರತಿಗಳೂ ಇವೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ಬ್ರಿಟಿಷ್‌ ಅಧಿಕಾರಿ ಗಳೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳು, ಅಂಚೆ  ಪತ್ರಗಳನ್ನು ನೋಡಬಹುದು.

ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದಾಗ ಬಳಸಿದ ಸಮವಸ್ತ್ರ ಹಾಗೂ ಆಸನಗಳೂ ಗಮನ ಸೆಳೆಯುತ್ತವೆ.

‘ನಿರ್ಯಾಣ’ ಸ್ಥಳ
ಮುದ್ದೇನಹಳ್ಳಿಯಲ್ಲಿ ವಿಶ್ವೇಶ್ವರಯ್ಯ ಅವರ ‘ನಿರ್ಯಾಣ ಸಮಾಧಿ’ ಇದೆ. ಆದರ ಸುತ್ತಲು ಸುಂದರವಾದ ಉದ್ಯಾನವಿದೆ. ಸ್ನೇಹಿತರೊಟ್ಟಿಗೆ  ಕೆಲ ಹೊತ್ತು ವಾಯುವಿಹಾರ ಮಾಡಬಹುದು. ಅಥವಾ ಕುಟುಂಬ ಸಮೇತರಾಗಿ ಬಂದರೆ ಮಕ್ಕಳು ಆಟ ವಾಡಲು ಉದ್ಯಾನದಲ್ಲಿ ಆಟಿಕೆಗಳು ಇವೆ.  v

**

ಹೋಗುವುದು ಹೀಗೆ...

ಮಾರ್ಗ –1: ಬೆಂಗಳೂರಿನಿಂದ ಮುದ್ದೇನಹಳ್ಳಿಯ ನಡುವೆ 58.5 ಕಿ.ಮೀ ದೂರವಿದ್ದು, ಮಲ್ಲೇಶ್ವರಂ, ದೇವನಹಳ್ಳಿ, ವೆಂಕಟಗಿರಿಕೋಟೆ, ತರಬನಹಳ್ಳಿ ಮಾರ್ಗವಾಗಿ ಹೋಗಬಹುದು.

ಮಾರ್ಗ–2: ಬೆಂಗಳೂರಿನಿಂದ ಮುದ್ದೇನಹಳ್ಳಿಗೆ 60 ಕಿ.ಮೀ ದೂರವಿದ್ದು, ವಿಧಾನ ಸೌಧ,  ಮೇಖ್ರಿ ವೃತ್ತ, ಯಲಹಂಕ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣ, ದೇವನಹಳ್ಳಿ, ವೆಂಕಟಗಿರಿಕೋಟೆ ಮಾರ್ಗವಾಗಿಯೂ ಹೋಗಬಹುದು.
ಬೆಂಗಳೂರಿನಿಂದ ರೈಲಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಹೋದರೆ, ರೈಲು ನಿಲ್ದಾಣ ಸಮೀಪದಿಂದ ಮುದ್ದೇನಹಳ್ಳಿಗೆ ಹೋಗಲು ಬಸ್‌ಗಳ ಸೌಕರ್ಯವಿದೆ.
 
**
ಸಮೀಪದ ಪ್ರವಾಸಿ ತಾಣಗಳು
* ನಂದಿ ಗಿರಿಧಾಮ
ಮುದ್ದೇನಹಳ್ಳಿ ವೀಕ್ಷಿಸಿದ ನಂತರ ಸಮೀಪದ ನಂದಿ ಬೆಟ್ಟಕ್ಕೆ ಭೇಟಿ ನೀಡಬಹುದು. ಇದು ರಾಜ್ಯದ ಪ್ರಸಿದ್ಧ ಗಿರಿಧಾಮ. ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಆರ್ಕಾವತಿ, ಚಿತ್ರಾವತಿ, ಪಾಪಾಗ್ನಿ ನದಿಗಳ ಉಗಮ ಸ್ಥಳವಾದ ನಂದಿಬೆಟ್ಟಕ್ಕೆ ಪುಷ್ಮಾಂಡ ಗಿರಿ ಎಂಬ ಹೆಸರೂ ಇದೆ.
 
1927ರಲ್ಲಿ ಮಹಾತ್ಮ ಗಾಂಧೀಜಿ ಅವರು ನಂದಿ ಗಿರಿಧಾಮದಲ್ಲಿ 47 ದಿನ ವಿಶ್ರಾಂತಿ ಪಡೆದು ಸ್ವಾತಂತ್ರ್ಯ ಹೋರಾಟದ ರೂಪುರೇಷಗಳ ಬಗ್ಗೆ ಚರ್ಚಿಸಿದ್ದರು. ಗಾಂಧೀಜಿ ಅವರು ಉಳಿದಿದ್ದ ‘ಕನ್ನಿಂಗ್‌ ಹ್ಯಾಂ ಲಾಡ್ಜ್’ಗೆ ಈಗ ‘ಗಾಂಧಿ ನಿಲಯ’ ಎಂಬ ಹೆಸರಿದೆ. 
 
ಎಲ್ಲೆಡೆ ಹಸಿರು ಮತ್ತು ಬಗೆ ಬಗೆಯ ಬಣ್ಣದ ಹೂಗಳಿಂದ ಕೂಡಿರುವ ಬೆಟ್ಟದ ಸುತ್ತ ಅಮೂಲ್ಯವಾದ ಔಷಧೀಯ ಸಸ್ಯ ಸಂಕುಲವಿದೆ. ‘ಟಿಪ್ಪು ಡ್ರಾಪ್’ ಮತ್ತು ‘ಹೈದರ್‌ ಡ್ರಾಪ್‌’ ಹಾಗೂ ವೀರಭಧ್ರ  ಸ್ವಾಮಿ ದೇವಾಲಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.
 
**
*ನಂದಿ ಗ್ರಾಮ
ಚಿಕ್ಕಬಳ್ಳಾಪುರದಿಂದ 4 ಕಿ.ಮೀ ದೂರದಲ್ಲಿ ನಂದಿ ಗ್ರಾಮ ಇದೆ. ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ಭೋಗ ನಂದೀಶ್ವರ ದೇವಾಲಯವಿದೆ. ಜತೆಗೆ, ಆರುಣಾಚಲ ದೇಗುಲ ಮತ್ತು ಉಮಾ ಮಹೇಶ್ವರಿ ದೇಗುಲಗಳಿವೆ. ಬಲ್ಲಾಳ ರಾಜರ ಕಾಲದ ಶಿಲಾ ಶಾಸನಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿದೆ. ದೇಗುಲದ ಪಕ್ಕದಲ್ಲಿ ಸುಂದರವಾದ ಪುಷ್ಕರಣಿ ಇದ್ದು, ಹಲವು ಚಲನಚಿತ್ರಗಳು ಚಿತ್ರೀಕರಣಗೊಂಡಿವೆ. 
 
**
* ಜಕ್ಕಲಮಡಗು
ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯನ್ನು ಬಿಂಬಿಸುವ ಈ ಜಲಾಶಯವು ಇಂದು ಚಿಕ್ಕಬಳ್ಳಾಪುರ ನಗರದ ಜೀವ ಸೆಲೆ. ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದು.
 
**
* ರಂಗಸ್ಥಳ
ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿಗೆ ತೆರಳುವ ಮಾರ್ಗದಲ್ಲಿ 7 ಕಿ.ಮೀ. ಕ್ರಮಿಸಿದರೆ ತಿಪ್ಪೇನಹಳ್ಳಿ ಬಳಿ  ಶ್ರೀರಂಗನಾಥ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಇದು ರಂಗಸ್ಥಳ ದೇವಾಲಯ ಎಂದೇ ಹೆಸರಾಗಿದೆ. 108 ಅಡಿ ಎತ್ತರದ ರಾಜಗೋಪುರ ಮತ್ತು ದೇವಾಲಯದ ಸುತ್ತಲು 24 ಶಿಲಾಸ್ತಂಭಗಳನ್ನು ಒಳಗೊಂಡ ಸುಂದರವಾದ ಹಜಾರವಿದೆ. 
 
**
* ಪಾಪಾಗ್ನಿ ಮಠ
ಚಿಕ್ಕಬಳ್ಳಾಪುರದಿಂದ 5ಕಿ.ಮೀ ದೂರದಲ್ಲಿದೆ ಪಾಪಾಗ್ನಿ ಮಠ. ಕಾಲಜ್ಞಾನಿ ಪೊತುವಾರಿ ಬ್ರಹ್ಮಯ್ಯ ಹುಟ್ಟಿದ ಸ್ಥಳ ಇದು ಎಂಬ ಪ್ರತೀತಿ ಇದೆ. ಪ್ರಸ್ತುತ ಪಾಪಾಗ್ನಿ ಮಠವನ್ನು ದಕ್ಷಿಣ ಕಾಶಿ ಮತ್ತು ಪಂಚ ನದಿ ಕ್ಷೇತ್ರ ಎಂದು ಕರೆಯಲಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT