ಅಲಿಗಡ, ಉತ್ತರಪ್ರದೇಶ : ಹಳೆಯ ನೋಟು ಬದಲಾಯಿಸಿಕೊಡಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದಕ್ಕೆ ಬೆಂಕಿ ಹಚ್ಚಿಕೊಂಡಿದ್ದ ದಿನಗೂಲಿ ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಇಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರಜಿಯಾ (45) ಎಂದು ಗುರುತಿಸಲಾಗಿದೆ.
₹ 500ರ ನೋಟು ಬದಲಾಯಿಸಿ ಕೊಡುವಂತೆ ರಜಿಯಾ ಬ್ಯಾಂಕಿನ ವಿವಿಧ ವಿಭಾಗಗಳಿಗೆ ನಾಲ್ಕೈದು ದಿನ ಸುತ್ತಿದ್ದರು. ಆದರೂ ಅಧಿಕಾರಿಗಳು ನೋಟು ಬದಲಾಯಿಸಿ ಕೊಟ್ಟಿರಲಿಲ್ಲ. ಇದರಿಂದ ಮನನೊಂದು ನವೆಂಬರ್ 20ರ ರಾತ್ರಿ ಬೆಂಕಿ ಹಚ್ಚಿಕೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಮಹಿಳೆಯ ಸಾವು ಖಂಡಿಸಿ ಕುಟುಂಬ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ವಿಷಯವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಅಧಿಕಾರಿಗಳು ಭರವಸೆ ನೀಡಿದ ನಂತರ ಅಂತ್ಯಕ್ರಿಯೆ ನಡೆಸಿದರು.