ಕಡೂರು ತಾಲ್ಲೂಕಿನ ಕೆಲವು ಹಳ್ಳಿಗಳ ನ್ಯಾಯಬೆಲೆ ಅಂಗಡಿಗಳಲ್ಲಿ ‘ಅನ್ನಭಾಗ್ಯ’ ಯೋಜನೆಗೆ ಕನ್ನ ಹಾಕುವ ಕಳ್ಳರಿದ್ದಾರೆ. ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸ್ಥಳೀಯ ರಾಜಕೀಯ ವ್ಯಕ್ತಿಗಳ ಪ್ರಭಾವ ಮತ್ತು ಅನಕ್ಷರಸ್ಥರ ಅಮಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಪಡಿತರವನ್ನು ಎಲೆಕ್ಟ್ರಾನಿಕ್ ಯಂತ್ರದ ಮೂಲಕ ತೂಕ ಮಾಡಿ ವಿತರಿಸಬೇಕೆಂಬ ಆದೇಶವಿದ್ದರೂ ಏನೇನೋ ಸಬೂಬು ಹೇಳಿ ಹಳೆಯ ತಕ್ಕಡಿಯಲ್ಲಿಯೇ ತೂಗಿ ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ. ಫಲಾನುಭವಿಗಳು ಈ ಬಗ್ಗೆ ಪ್ರಶ್ನಿಸಿದರೆ ಪಡಿತರ ವಿತರಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ಹೀಗೆ ಕದ್ದ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಪಕ್ಕದ ದಿನಸಿ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್ದಾರರೇ ಕೊಂಡುಕೊಳ್ಳಬೇಕಾದ ಸ್ಥಿತಿ ಇದೆ. ಇಷ್ಟಾದರೂ ಸರ್ಕಾರ ಇಂತಹ ಭ್ರಷ್ಟಾಚಾರ ಪತ್ತೆಗೆ ಮುಂದಾಗದಿರುವುದು ದುರಂತವೇ ಸರಿ.
-ಶ್ರೀನಿವಾಸ ದೇವಾಂಗ, ಕಡೂರು