ತೀರ್ಥಹಳ್ಳಿ: ಪಟ್ಟಣದ ಸರ್ಕಾರಿ ಜೆ.ಸಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದ ಹತ್ತು ರೋಗಿಗಳಿಗೆ ಎಚ್1ಎನ್1 ಸೋಂಕು ತಗುಲಿರುವುದು ಮಂಗಳವಾರ ಬೆಳಕಿಗೆ ಬಂದಿದೆ.
‘ಮಣಿಪಾಲದ ರೋಗಾಣು ಸಂಶೋಧನಾ ಕೇಂದ್ರದಿಂದ ಮಂಗಳವಾರ ಬಂದ ವೈದ್ಯಕೀಯ ವರದಿಯಲ್ಲಿ ಹತ್ತು ಜನರಲ್ಲಿ ಎಚ್1ಎನ್1 ರೋಗಾಣು ಇರುವುದು ದೃಢಪಟ್ಟಿದೆ. ಇದುವರೆಗೆ ವಿವಿಧ ಭಾಗದ 36 ಜನರಲ್ಲಿ ಈ ರೋಗಾಣು ಇರುವುದು ಕಂಡುಬಂದಿದೆ. ಆಗುಂಬೆ, ಅರಳಸುಳಿ, ಮಾಳೂರು ಭಾಗದಲ್ಲಿ ಈ ರೋಗ ಹೆಚ್ಚು ಕಾಣಿಸಿ ಕೊಂಡಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.
ಹೊನ್ನೆತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾರಳಿಯ ನಾಗೇಶ್ ಅವರು ಇದೇ 4ರಂದು ಎಚ್1ಎನ್1 ಕಾಯಿಲೆಯಿಂದ ಮೃತಪಟ್ಟಿದ್ದರು.