ಕಳೆದ ವರ್ಷ ಸೆಪ್ಟೆಂಬರ್ 29ರಂದು ಭಾರತೀಯ ಭೂಸೇನೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಯಶಸ್ವಿಯಾಗಿ ‘ನಿರ್ದಿಷ್ಟ ದಾಳಿ’ ಅಥವಾ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿತು. ಮಧ್ಯರಾತ್ರಿ ನಡೆಸಿದ ದಾಳಿಯಲ್ಲಿ ಭಾರತದ ಕಮಾಂಡೊಗಳು ಭಯೋತ್ಪಾದಕರ ಏಳು ಶಿಬಿರಗಳನ್ನು ಗುರಿಯಾಗಿಸಿಕೊಂಡರು. ಡಜನ್ಗಟ್ಟಲೆ ಭಯೋತ್ಪಾದಕರನ್ನು ಕೊಂದು, ಭೂಸೇನೆಯ ಯಾರೊಬ್ಬರೂ ಪ್ರಾಣ ತೆರದೆ ಮರಳಿದರು.
‘ಸರ್ಜಿಕಲ್ ಸ್ಟ್ರೈಕ್’ ಎಂದರೆ ಶತ್ರುನೆಲೆಯ ನಿರ್ದಿಷ್ಟ ಭಾಗವನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿ. ಹೆಚ್ಚು ಜೀವಹಾನಿ ಆಗದಂತೆ ಎಚ್ಚರವಹಿಸುವ ಕ್ರಮವಿದು. ಗುಟ್ಟಾಗಿ ನಡೆಯುವ ಈ ದಾಳಿ ಶತ್ರುವಿಗೆ ಅಚ್ಚರಿಯನ್ನೂ, ಸವಾಲನ್ನೂ ಒಡ್ಡುತ್ತದೆ. ಅತಿ ವೇಗವಾಗಿ ನಡೆಯುವ ಈ ದಾಳಿ ಬೆಚ್ಚಿಬೀಳಿಸುವಂಥದ್ದು. ಪೂರ್ಣ ಪ್ರಮಾಣದ ಯುದ್ಧ ಇದಲ್ಲ.
ಮೂರು ಬಗೆಗಳಲ್ಲಿ ಇಂಥ ದಾಳಿ ನಡೆಸಲು ಸಾಧ್ಯವಿದೆ. ವೈಮಾನಿಕ ದಾಳಿ ಹೆಚ್ಚು ಚಾಲ್ತಿಯಲ್ಲಿರುವ ಬಗೆ. ವಿಮಾನದಿಂದ ಕ್ಷಿಪಣಿಗಳನ್ನು ನಿರ್ದಿಷ್ಟ ನೆಲೆಗಳ ಮೇಲೆ ಹಾಕುವುದು ವೈಮಾನಿಕ ದಾಳಿಯ ತಂತ್ರ. ಇದಕ್ಕೆ ಸುಸಜ್ಜಿತ ವಾಯುಪಡೆ ಬೇಕು. ಉದಾಹರಣೆಗೆ, ಮೊದಲ ಹಾಗೂ ಎರಡನೇ ಕೊಲ್ಲಿ ಯುದ್ಧಗಳಲ್ಲಿ ಅಮೆರಿಕ ತನ್ನ ವಾಯುಬಲದ ಸಾಮರ್ಥ್ಯವನ್ನು ಈ ದಾಳಿಯ ಮೂಲಕ ದೃಢಪಡಿಸಿತು.
ಎರಡನೇ ಬಗೆಯ ದಾಳಿಯಲ್ಲಿ ವಿಮಾನದಿಂದ ವಿಶೇಷ ಯೋಧರು ಧುಮುಕಿ ದಾಳಿ ನಡೆಸುತ್ತಾರೆ. ವೇಗವಾಗಿ ನಡೆಯುವ ಈ ದಾಳಿ ಹೆಚ್ಚು ಚಾಕಚಕ್ಯತೆಯನ್ನು ಒಳಗೊಂಡಿರುತ್ತದೆ. ಒಸಾಮಾ ಬಿನ್ ಲಾಡೆನ್ನನ್ನು ಕೊಲ್ಲಲು ಅಮೆರಿಕ ಪಡೆಗಳು ನಡೆಸಿದ ‘ಗೊರೊನಿಮೊ’ ಕಾರ್ಯಾಚರಣೆ ಇದಕ್ಕೆ ಉದಾಹರಣೆ.
ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ನಿರ್ದಿಷ್ಟ ದಾಳಿ ಮೂರನೇ ಬಗೆಯದ್ದು. ಇದರಲ್ಲಿ ಕಮಾಂಡೊಗಳು ಶತ್ರುನೆಲೆಗಳಿಗೆ ಕಾಲ್ನಡಿಗೆಯಲ್ಲಿ ಲಗ್ಗೆ ಇಟ್ಟು ದಾಳಿ ನಡೆಸುತ್ತಾರೆ. ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವುದು ಇಂಥ ದಾಳಿಯ ಉದ್ದೇಶ.