ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ–ಬಾಗನ್‌ ಪಂದ್ಯ ಡ್ರಾ

Last Updated 11 ಮಾರ್ಚ್ 2017, 19:37 IST
ಅಕ್ಷರ ಗಾತ್ರ

ಬೆಂಗಳೂರು:  ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡಕ್ಕೆ ತವರಿನಲ್ಲಿ  ಜಯದ ಆಸೆ ಈಡೇರಲಿಲ್ಲ.
ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಿಎಫ್‌ಸಿ ಮತ್ತು ಬಲಿಷ್ಠ ಮೋಹನ್‌ ಬಾಗನ್‌ ನಡುವಣ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯ ಗೋಲು ರಹಿತವಾಗಿ ಅಂತ್ಯಕಂಡಿತು. ಇದರಿಂದಾಗಿ ಸುನಿಲ್‌ ಚೆಟ್ರಿ ಪಡೆಯ ಪ್ರಶಸ್ತಿಯ ಹಾದಿ ಇನ್ನಷ್ಟು ದುರ್ಗಮವಾಯಿತು.

ಪಾಯಿಂಟ್ಸ್‌ ಪಟ್ಟಿಯಲ್ಲಿ ಐದನೇ ಸ್ಥಾನ ಹೊಂದಿದ್ದ ಆತಿಥೇಯರು ಪ್ರಶಸ್ತಿ ಉಳಿಸಿಕೊಳ್ಳಬೇಕಾದರೆ ಬಾಕಿ ಉಳಿದಿರುವ ಎಲ್ಲಾ ಲೀಗ್‌ ಪಂದ್ಯಗ ಳಲ್ಲೂ ಗೆಲ್ಲುವುದು ಅನಿವಾರ್ಯ ಅನಿಸಿತ್ತು. ಇದನ್ನು ಗಮನದಲ್ಲಿಟ್ಟು ಕೊಂಡು ಆಡಲಿಳಿದ ಬೆಂಗಳೂರಿನ ತಂಡದ ಆಟಗಾರರು ಮೊದಲ ಏಳು ನಿಮಿಷಗಳ ಅವಧಿಯಲ್ಲಿ ಪದೇ ಪದೇ ಚೆಂಡಿನೊಂದಿಗೆ ಎದುರಾಳಿಗಳ ಆವರಣಕ್ಕೆ ಲಗ್ಗೆ ಇಡುತ್ತಿದ್ದರು. ಆದರೆ ಹೊಂದಾಣಿಕೆಯ ಕೊರತೆಯಿಂದಾಗಿ ಚೆಂಡನ್ನು ಗುರಿ ಮುಟ್ಟಿಸಲು ಯಾರಿಗೂ ಆಗಲಿಲ್ಲ.

ಮರುನಿಮಿಷದಲ್ಲಿ (8ನೇ ನಿಮಿಷ) ಬಿಎಫ್‌ಸಿಗೆ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತ್ತು. ನಾಯಕ ಚೆಟ್ರಿ ಇದನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದರು. 16ನೇ ನಿಮಿಷದಲ್ಲಿ ಬಾಗನ್‌ ಕೂಡ  ಪೆನಾಲ್ಟಿ ಕಾರ್ನರ್‌ ಅವಕಾಶ ಸೃಷ್ಟಿಸಿಕೊಂಡಿತ್ತು. ಈ ತಂಡದ ಮುಂಚೂಣಿ ಆಟಗಾರ ಡೆರಿಲ್‌ ಡಫಿ ಬಾರಿಸಿದ ಚೆಂಡನ್ನು ಬಿಎಫ್‌ಸಿ ಗೋಲ್‌ಕೀಪರ್‌ ಅರಿಂದಮ್‌ ಭಟ್ಟಾ ಚಾರ್ಯ ಬಲಕ್ಕೆ ಜಿಗಿದು ಸೊಗಸಾದ ರೀತಿಯಲ್ಲಿ ತಡೆದಾಗ ಅಂಗಳದಲ್ಲಿ ಖುಷಿ ಉಕ್ಕಿ ಹರಿಯಿತು. ಆ ನಂತರವೂ ಆತಿಥೇಯ ಆಟಗಾರರು ಚೆಂಡಿ ನೊಂದಿಗೆ ಎದುರಾಳಿ ಆವರಣ ಪ್ರವೇ ಶಿಸುವ ಕಾರ್ಯ ಮುಂದುವರಿಸಿದರು. ಆದರೆ ಖಾತೆ ತೆರೆಯಲು ಮಾತ್ರ ಆಗಲಿಲ್ಲ.

25ನೇ ನಿಮಿಷದಲ್ಲಿ ಬಾಗನ್‌ಗೆ ಎರಡನೇ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತ್ತು. ಯೂಸಾ ಬಾರಿಸಿದ ಚೆಂಡನ್ನು ತಡೆಯುವಲ್ಲಿ ಯಶಸ್ವಿಯಾದ ಅರಿಂದಮ್‌ ಆತಿಥೇಯರನ್ನು ಸಂಕಷ್ಟದಿಂದ ದೂರ ಮಾಡಿದರು.

ಇದಾದ ಐದು ನಿಮಿಷದಲ್ಲಿ ಬಿಎಫ್‌ಸಿಗೆ ಗೋಲು ಗಳಿಸುವ ಸುವರ್ಣಾವಕಾಶ ಸಿಕ್ಕಿತ್ತು. ಆದರೆ ಜಾನ್‌ ಜಾನ್ಸನ್‌ ಇದನ್ನು ಕೈಚೆಲ್ಲಿದರು. 36ನೇ ನಿಮಿಷದಲ್ಲಿ ಯೂಜೆನ್ಸನ್‌ ಲಿಂಗ್ಡೊ ಕೂಡ ಸಿಕ್ಕ ಅವಕಾಶ ಬಳಸಿಕೊಳ್ಳಲಿಲ್ಲ. ಬಾಗನ್‌ ಸ್ಥಿತಿಯೂ ಇದರಿಂದ ಭಿನ್ನವಾಗಿರಲಿಲ್ಲ. ಹೀಗಾಗಿ ಉಭಯ ತಂಡಗಳು ಗೋಲು ರಹಿತವಾಗಿ ವಿರಾಮಕ್ಕೆ ಹೋದವು.

ಉತ್ತರಾರ್ಧದಲ್ಲಿ ಆತಿಥೇಯರ ಆಟ ಕಳೆಗಟ್ಟಿತು. ಚೆಂಡನ್ನು ಹೆಚ್ಚು ಹೊತ್ತು ತಮ್ಮ ಬಳಿಯೇ ಇರುವಂತೆ ನೋಡಿಕೊಂಡ ಚೆಟ್ರಿ ಪಡೆಯ ಆಟಗಾರರು ನಿರಂತರವಾಗಿ ಎದುರಾಳಿ ಗಳ ರಕ್ಷಣಾ ಕೋಟೆಯ ಮೇಲೆ ದಾಳಿ ನಡೆಸಿದರು. ಪರಿಣಾಮ 49ನೇ ನಿಮಿಷದಲ್ಲಿ ಆತಿಥೇಯರಿಗೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತು. ಲಿಂಗ್ಡೊ ಬಾರಿಸಿದ ಚೆಂಡನ್ನು ಬಾಗನ್‌ ಆವರಣದೊಳಗಿದ್ದ ಜಾನ್‌ ಜಾನ್ಸನ್‌ ತಲೆತಾಗಿಸಿ ಗುರಿ ಮುಟ್ಟಿಸಲು ಮುಂದಾದರು. ಅವರ ಪ್ರಯತ್ನವನ್ನು ಎದುರಾಳಿ ಗೋಲ್‌ ಕೀಪರ್‌ ಶಿಬಿನ್‌ರಾಜ್‌ ಕುನ್ನಿಯಿಲ್‌ ವಿಫಲಗೊಳಿಸಿದರು.  ಆ ನಂತರವೂ ಮುನ್ನಡೆ ಗೋಲಿಗಾಗಿ ಎರಡೂ ತಂಡದವರಿಂದ ಹೋರಾಟ ಮುಂದುವರಿದಿತ್ತು. ಇದರ ನಡುವೆ ಆಗಾಗ ಪರಸ್ಪರರನ್ನು ಕೆಣಕುವ, ತಳ್ಳುವ ಕಾರ್ಯವೂ ಜರುಗಿತ್ತು.  ಹೀಗೆ ಪಂದ್ಯ ಕಾವೇರಿದಾಗಲೆಲ್ಲಾ ಪ್ರೇಕ್ಷಕರ ಗ್ಯಾಲರಿಯಲ್ಲಿ ಜೋರು ಕರತಾಡನವೂ ಸೃಷ್ಟಿಯಾಗುತ್ತಿತ್ತು.

ಸಿಹಿ–ಕಹಿ: ಇದರ ನಡುವೆ ಬಾಗನ್‌ ಸಂಭ್ರಮ ಆಚರಿಸಿತು. 84ನೇ ನಿಮಿಷದಲ್ಲಿ ಸೋನಿ ನೋರ್ಡೆ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ಯೂಸಾ ಗುರಿ ಮುಟ್ಟಿಸಿದಾಗ ಪಶ್ಚಿಮ ಬಂಗಾಳದ ತಂಡದಲ್ಲಿ ಸಂತಸದ ಹೊನಲು ಹರಿಯಿತು.

ಅವರು ಆಫ್‌ ಸೈಡ್‌ನಿಂದ ಚೆಂಡನ್ನು ಗುರಿ ಸೇರಿಸಿದ್ದು ಖಚಿತವಾದ್ದರಿಂದ ರೆಫರಿ ಅದನ್ನು ಮಾನ್ಯ ಮಾಡಲಿಲ್ಲ. ಹೀಗಾಗಿ ಬಾಗನ್‌ ಆಟಗಾರರ ಮೊಗದಲ್ಲಿ ಅರಳಿದ್ದ ನಗು ಕ್ಷಣಾರ್ಧದಲ್ಲಿ ಮರೆಯಾಯಿತು.

ಆ ನಂತರದ ಆರು ನಿಮಿಷದಲ್ಲಿ ಎರಡೂ ತಂಡಗಳೂ ಗೆಲುವಿನ ಗೋಲಿ ಗಾಗಿ ಛಲದಿಂದ ಹೋರಾಡಿದವು. ಹೆಚ್ಚುವರಿ ಅವಧಿಯಲ್ಲೂ ಪೈಪೋಟಿ ಮುಂದುವರಿಯಿತು. ಆದರೆ ಗೆಲುವು ಮಾತ್ರ ಯಾರಿಗೂ ಒಲಿಯಲಿಲ್ಲ.

ಮೂವರಿಗೆ  ಹಳದಿ ಕಾರ್ಡ್‌

ಒರಟು ಆಟ ಆಡಿದ್ದರಿಂದ ಮೂರು ಮಂದಿ ಆಟಗಾರರು ಶನಿವಾರ ಹಳದಿ ಕಾರ್ಡ್‌ ಪಡೆದರು.
9ನೇ ನಿಮಿಷದಲ್ಲಿ ಬಾಗನ್‌ ತಂಡದ ಸುಭಾಶಿಶ್‌ ಬೋಸ್‌, ಬಿಎಫ್‌ಸಿ ಆಟಗಾರನನ್ನು ತಳ್ಳಿದರೆ, 25ನೇ ನಿಮಿಷದಲ್ಲಿ ಬಿಎಫ್‌ಸಿ ತಂಡದ ರಕ್ಷಣಾ ವಿಭಾಗದ ಆಟಗಾರ ನಿಶು ಕುಮಾರ್‌, ಎದುರಾಳಿ ತಂಡದ ನಾಯಕ, ಜಪಾನ್‌ನ ಮಿಡ್‌ಫೀಲ್ಡರ್‌ ಕಾತ್ಸುಮಿ ಯೂಸಾ ಅವರನ್ನು ನೆಲಕ್ಕೆ ಬೀಳಿಸಿದರು. 87ನೇ ನಿಮಿಷದಲ್ಲಿ ಬಿಎಫ್‌ಸಿ ಆಟಗಾರ ಕ್ಯಾಮರಾನ್‌ ಅಲೆಕ್ಸಾಂಡರ್‌ ವಾಟ್ಸನ್‌ಗೂ ಹಳದಿ ಕಾರ್ಡ್‌ನ ದರ್ಶನವಾಯಿತು.
ಸುಭಾಶಿಶ್‌ಗೆ ಕೆಂಪು ಕಾರ್ಡ್‌
69ನೇ ನಿಮಿಷದಲ್ಲಿ ಬಿಎಫ್‌ಸಿ ಆವರಣಕ್ಕೆ ಲಗ್ಗೆ ಇಟ್ಟ ಬಾಗನ್‌ ತಂಡದ ಸುಭಾಶಿಶ್‌ ಬೋಸ್‌, ಬಿಎಫ್‌ಸಿಯ ಮುಂಚೂಣಿ ಆಟಗಾರ ಉದಾಂತ್‌ ಸಿಂಗ್‌್ ಕುಮಾಮ ಅವರ ಕಾಲು ತುಳಿದರು. ಇದನ್ನು ರೆಫರಿ ಆಕ್ಷೇಪಿಸಿದಾಗ ಅವರ ಜೊತೆ ಜಟಾಪಟಿ ನಡೆಸಿದರು. ಇದರಿಂದ ಕೆರಳಿದ ರೆಫರಿ, ಸುಭಾಶಿಶ್‌ಗೆ  ಕೆಂಪು ಕಾರ್ಡ್‌ ದರ್ಶನ ಮಾಡಿ ಅಂಗಳ ದಿಂದ ಹೊರ ಕಳು ಹಿಸಿದರು. ಹೀಗಾಗಿ ಬಾಗನ್‌ ತಂಡ  10 ಮಂದಿಯೊಂದಿಗೆ ಆಡಬೇಕಾಯಿತು.

14ರಂದು ಮತ್ತೆ ಮುಖಾಮುಖಿ

ಬಿಎಫ್‌ಸಿ ಮತ್ತು ಬಾಗನ್‌ ತಂಡಗಳು ಮಾರ್ಚ್‌ 14 ರಂದು ನಡೆಯುವ ಎಎಫ್‌ಸಿ ಕಪ್‌ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಮತ್ತೆ ಮುಖಾ ಮುಖಿಯಾಗಲಿವೆ. ಈ ಪಂದ್ಯವೂ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ.
ಆಟಗಾರರ ಬದಲಾವಣೆಯ ತಂತ್ರ
ಪಂದ್ಯವನ್ನು ಗೆದ್ದೇ ತೀರಬೇಕೆಂದು ನಿಶ್ಚಿಯಿಸಿದಂತೆ ಕಂಡ ಉಭಯ ತಂಡಗಳ ಕೋಚ್‌ಗಳು ಆಟಗಾರರನ್ನು ಬದಲಿಸುವ ತಂತ್ರಕ್ಕೂ ಮೊರೆ ಹೋದರು. ಬಿಎಫ್‌ಸಿ ಕೋಚ್‌ ಅಲ್ಬರ್ಟೊ ರೋಕಾ ದ್ವಿತೀಯಾರ್ಧ ದಲ್ಲಿ ಮೂರು ಆಟಗಾರರನ್ನು ಬದಲಿಸಿದರು. 63ನೇ ನಿಮಿಷದಲ್ಲಿ ರಕ್ಷಣಾ ವಿಭಾಗದ ಆಟಗಾರ ನಿಶು ಕುಮಾರ್‌ ಬದಲಿಗೆ ಸಲಾಂ ರಂಜನ್‌ ಸಿಂಗ್‌ ಅವರನ್ನು ಅಂಗಳಕ್ಕಿಳಿಸಿದ ಅವರು 66ನೇ ನಿಮಿಷದಲ್ಲಿ ಯೂಜೆನ್ಸನ್‌ ಲಿಂಗ್ಡೊ ಬದಲು ಸಿ.ಕೆ. ವಿನೀತ್‌ಗೆ ಅವಕಾಶ ನೀಡಿದರು. ಬಳಿಕ ಸಂದೇಶ್‌ ಜಿಂಗಾನ್‌ ಅವರನ್ನು ಹೊರ ಕರೆದು ಮಲಸ್ವಾಮ್‌ಜುವಾಕ್ ಅವರನ್ನು ಆಡಲಿಳಿಸಿದರು.
ಬಾಗನ್‌ ಕೋಚ್‌ ಸಂಜಯ್‌ ಸೇನ್‌ ಅವರು ಡೇರಿಲ್‌ ಡಫಿ ಮತ್ತು ಶೆಹನಾಜ್‌ ಸಿಂಗ್‌ ಬದಲು ಕ್ರಮವಾಗಿ ಪ್ರವೀಣ್ ದಾಸ್‌ ಮತ್ತು ವಿಕ್ರಂಜಿತ್‌ ಸಿಂಗ್‌ ಅವರನ್ನು ಮೈದಾನಕ್ಕಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT