ನವದೆಹಲಿ: ಐ.ಎಸ್ ಸಂಘಟನೆ ಜತೆ ನಂಟು ಹೊಂದಿದ್ದ ಆರೋಪ ಎದುರಿಸುತ್ತಿರುವ ಕರ್ನಾಟಕದ ಯುವಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಶಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರಿನ ಅಬಿದ್ ಖಾನ್ (23) ಎಂಬಾತನನ್ನು ಹಿಮಾಚಲ ಪ್ರದೇಶ ಪೊಲೀಸರು ಜನವರಿಯಲ್ಲಿ ಬಂಧಿಸಿದ್ದರು. ಪೊಲೀಸರು ಆ ಬಳಿಕ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಿದ್ದರು. ಆರೋಪಿಯನ್ನು 14 ದಿನಗಳ ಕಾಲ ಎನ್ಐಎ ಕಸ್ಟಡಿಗೆ ಒಪ್ಪಿಸಿ ಎನ್ಐಎ ವಿಶೇಷ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.
ಅಬಿದ್ನನ್ನು ತನಿಖೆಗಾಗಿ ನವದೆಹಲಿಗೆ ಕರೆತರಲಾಗುತ್ತದೆ ಎಂದು ಎನ್ಐಎ ಪ್ರಕಟಣೆ ತಿಳಿಸಿದೆ.
ಭಾರತ ಮಾತ್ರವಲ್ಲ, ಶ್ರೀಲಂಕಾದಲ್ಲೂ ಐ.ಎಸ್ ಸಂಘಟನೆಯ ಪರ ಚಟುವಟಿಕೆ ನಡೆಸುತ್ತಿದ್ದ ಅಬಿದ್, ಇಂಡೊನೇಷ್ಯಾ ಮೂಲಕ ಸಿರಿಯಾಕ್ಕೆ ತೆರಳಿ ಐ.ಎಸ್ ಸಂಘಟನೆ ಸೇರಲು ಯೋಜನೆ ಹಾಕಿಕೊಂಡಿದ್ದ ಎಂದು ಎನ್ಐಎ ಆರೋಪಿಸಿತ್ತು.