ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ಯಾಸದಿಂದ ಸಿಂಹಾಸನದವರೆಗೆ...

ದೇವಾಲಯದ ಪ್ರಧಾನ ಅರ್ಚಕ ಸ್ಥಾನದಿಂದ ಉತ್ತರಪ್ರದೇಶದ ಸಿಎಂ
Last Updated 22 ಮಾರ್ಚ್ 2017, 14:09 IST
ಅಕ್ಷರ ಗಾತ್ರ

ಲಖನೌ: ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರು ನಾಳೆ  ಉತ್ತರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ಫೈರ್‍ ಬ್ರಾಂಡ್ ಎಂದೇ ಖ್ಯಾತರಾಗಿರುವ ಯೋಗಿ ಆದಿತ್ಯನಾಥ್ ಗೋರಖ್‍ಪುರ್ ಚುನಾವಣಾ ಕ್ಷೇತ್ರದಿಂದ 1998ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಯೋಗಿ ಆದಿತ್ಯನಾಥ್ ರಾಜಕೀಯ ಪಯಣ
ಉತ್ತರಪ್ರದೇಶದ ಗೋರಖ್‍ನಾಥ್ ದೇವಾಲಯದಲ್ಲಿ  ಪ್ರಧಾನ ಅರ್ಚಕರಾಗಿದ್ದ ಆದಿತ್ಯನಾಥ್  ತಮ್ಮ 26ನೇ ವಯಸ್ಸಿನಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 12ನೇ ಲೋಕಸಭೆಯಲ್ಲಿ ಆಗ ಯೋಗಿ ಅವರೇ ಅತೀ ಕಿರಿಯ ಸಂಸದರಾಗಿದ್ದರು.

5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಯೋಗಿ, ಹಿಂದುತ್ವ ಪ್ರತಿಪಾದಕರಾಗಿಯೇ ಖ್ಯಾತರಾದವರು.

ಯೋಗಿ ಆದಿತ್ಯನಾಥ್ ಅವರ ಅಪ್ಪ ಧಾರ್ಮಿಕ ಗುರುವಾಗಿದ್ದ ಮಹಂತ್ ಅವೈದ್ಯನಾಥ್ ಅವರು  1989-98ರ ವರೆಗೆ ಗೆಲುವು ಸಾಧಿಸಿದ್ದ ಚುನಾವಣಾ ಕ್ಷೇತ್ರದಲ್ಲೇ ಆದಿತ್ಯನಾಥ್ ಸತತ ಜಯ ಗಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಾರ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಂತರ ಯೋಗಿ ಅವರೇ ಪ್ರಮುಖ ಪ್ರಚಾರಕರಾಗಿದ್ದರು.

2002ರಲ್ಲಿ ಹಿಂದೂ ಯುವ ವಾಹಿನಿ ಎಂಬ ಸಂಘಟನೆಯನ್ನು ಸ್ಥಾಪಿಸಿದ ಯೋಗಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ರಕ್ಷಣೆಗಾಗಿ ಈ ಸಂಘಟನೆ ಕಾರ್ಯವೆಸಗುತ್ತದೆ ಎಂದಿದ್ದರು. ಗೋರಕ್ಷಣೆ, ಲವ್ ಜಿಹಾದ್ ಮೊದಲಾದ ವಿಷಯಗಳಲ್ಲಿ ಮಧ್ಯಪ್ರವೇಶಿಸಿ ಹೋರಾಡುವ ಈ ಸಂಘಟನೆ ಗೋರಖ್‍ಪುರ್, ಮೌ, ದಿಯೋರಿಯಾ, ಖುಷಿನಗರ್, ಮಹಾರಾಜ್‍ಗಂಜ್, ಬಸ್ತಿ, ಸಂತ್ ಕಬೀರ್ ನಗರ್ ಮತ್ತು ಸಿದ್ದಾರ್ಥ್ ನಗರ್‍‍ನಲ್ಲಿ ಪ್ರಭುತ್ವ ಹೊಂದಿದೆ.

ಅಜಯ್ ಸಿಂಗ್ ಬಿಷ್ತ್ ಎಂಬುದು ಯೋಗಿ ಅವರ ನಿಜನಾಮ. ಎಚ್‍ಎನ್‍ಬಿ  ಗರ್ವಾಲ್ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಗಣಿತ ಪದವಿ.

ಪ್ರಚೋದನಾತ್ಮಕ ಮತ್ತು ತೀಕ್ಷ್ಣ ನುಡಿಯಿಂದಲೇ ಭಾಷಣ ಮಾಡುವುದಕ್ಕೆ ಯೋಗಿ ಜನಪ್ರಿಯರಾಗಿದ್ದಾರೆ.

2005ರಲ್ಲಿ  ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರನ್ನು 'ಶುದ್ದೀಕರಿಸುವ ಕಾರ್ಯಾಚರಣೆ' ಮೂಲಕ ಹಿಂದೂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದರು ಎಂಬ ಆರೋಪವಿದೆ. ಆದರೆ ಅದು ಮತಾಂತರವಲ್ಲ, ಹಿಂದೂ ಧರ್ಮದಿಂದ ಇನ್ನೊಂದು  ಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರುವ ಘರ್‍‍ವಾಪಸಿ ಕೆಲಸ ಎಂದು ಯೋಗಿ ವಾದಿಸುತ್ತಾರೆ.

2014ರಲ್ಲಿ ಕೇಂದ್ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೇರಿದ ನಂತರ ಗೋರಖ್‍ಪುರ್‍ ವಲ್ಲಿ ಅತೀ ಹೆಚ್ಚು ಘರ್‍‍ವಾಪಸಿ ಕಾರ್ಯಕ್ರಮಗಳು ನಡೆದಿವೆ. ಏತನ್ಮಧ್ಯೆ, ಮತಾಂತರ ನಿಷೇಧ ಆಗುವವರೆಗೆ ತಾನು ಮತಾಂತರವನ್ನು ನಿಲ್ಲಿಸುವುದಿಲ್ಲ ಎಂದು ಯೋಗಿ ಪಟ್ಟು ಹಿಡಿದಿದ್ದರು.

2007ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ಕೋಮುಗಲಭೆಯಲ್ಲಿಯೂ ಯೋಗಿ ಅವರ ಹೆಸರು ಕೇಳಿಬಂದಿತ್ತು. ಯೋಗಿ ಪ್ರಚೋದನಾತ್ಮಕ ಭಾಷಣಗಳು ಗಲಭೆಗೆ ಪ್ರೇರಣೆ ನೀಡಿತ್ತು ಎಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರ ಬಂಧನದ ಹಿನ್ನೆಲೆಯಲ್ಲಿ ಗೋರಖ್‍ಪುರ್ ಉದ್ವಿಗ್ನಗೊಂಡಿದ್ದು, ಮುಂಬೈ- ಗೋರಖ್‍ಪುರ್ ಗೋದಾನ್ ಎಕ್ಸ್ ಪ್ರೆಸ್ ರೈಲಿನ ಹಲವಾರು ಬೋಗಿಗಳನ್ನು ಸುಟ್ಟು ಹಾಕಲಾಗಿತ್ತು. ಈ ಕೃತ್ಯಗಳನ್ನು ಹಿಂದೂ ಯುವ ವಾಹಿನಿ ಕಾರ್ಯಕರ್ತರು ಮಾಡಿದ್ದಾರೆ ಎಂಬ ಆರೋಪವಿದೆ.

[related]

ಇತ್ತೀಚೆಗೆ  ಬಾಲಿವುಡ್ ನಟ ಶಾರುಖ್ ಶಾನ್ ಅವರನ್ನು ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್ ಅವರಿಗೆ ಹೋಲಿಸುವ ಮೂಲಕ ಯೋಗಿ ಆದಿತ್ಯನಾಥ್ ವಿವಾದಕ್ಕೀಡಾಗಿದ್ದರು.

ವಿವಾದ ಸೃಷ್ಟಿಸಿದ್ದ ಹೇಳಿಕೆಗಳು

* ಮುಸ್ಲಿಮರ ಪ್ರಮಾಣ ಶೇ 10ರಿಂದ 20 ಇರುವಲ್ಲಿ ಸಣ್ಣ ಮಟ್ಟದ ಗಲಭೆಗಳಾಗುತ್ತಿವೆ. ಶೇ 20–35 ಇರುವಲ್ಲಿ ತೀರಾ ದೊಡ್ಡ ಗಲಭೆಗಳಾಗುತ್ತಿವೆ. ಶೇ 35ಕ್ಕೂ ಹೆಚ್ಚು ಇರುವಲ್ಲಿ ಮುಸ್ಮಿಮೇತರರು ಬದುಕಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇದೆ

* ಮದರ್‌ ತೆರೇಸಾ ಅವರು ಭಾರತವನ್ನು ಮತಾಂತರಗೊಳಿಸುವ ಸಂಚಿನ ಭಾಗವಾಗಿದ್ದರು. ಸೇವೆಯ ಹೆಸರಿನಲ್ಲಿ ಹಿಂದೂಗಳನ್ನು ಮತಾಂತರ ಮಾಡಲಾಯಿತು

* ಶಿವ ಅತ್ಯಂತ ದೊಡ್ಡ ಯೋಗಿ. ದೇಶದ ಪ್ರತಿ ಕಣದಲ್ಲೂ ಆತ ನೆಲೆಸಿದ್ದಾನೆ. ಯೋಗ ಮತ್ತು ಶಿವನನ್ನು ಬೇಡ ಎನ್ನುವವರು ಈ ದೇಶವನ್ನು ಬಿಟ್ಟು ಹೋಗಬಹುದು

* ಜನ ತನ್ನ ಸಿನಿಮಾವನ್ನು ತಿರಸ್ಕರಿಸಿದರೆ, ತಾನು ಬೀದಿಯಲ್ಲಿ ಸಾಮಾನ್ಯ ಮುಸ್ಲಿಮನಂತೆ ಅಲೆದಾಡಬೇಕಾಗುತ್ತದೆ ಎಂಬುದು ಶಾರುಖ್‌ನ ಗಮನದಲ್ಲಿರಲಿ. ಉಗ್ರ ಹಫೀಜ್ ಸಯೀದ್ ಮತ್ತು ಶಾರುಖ್‌ನ ಭಾಷೆಯಲ್ಲಿ ವ್ಯತ್ಯಾಸವೇ ಇಲ್ಲ

* ಯೋಗಿ ಆದಿತ್ಯನಾಥ್‌ ಅವರು ಕಠೋರ ಹಿಂದುತ್ವವಾದಿ ಎಂದು ಬಿಂಬಿಸಿರುವುದು ಮಾಧ್ಯಮ; ಆದರೆ, ಅವರು ಅಭಿವೃದ್ಧಿ ಪರವಾಗಿರುವ ವ್ಯಕ್ತಿ
- ಸಿದ್ಧಾರ್ಥನಾಥ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

ಜನರ ಹಿತಾಸಕ್ತಿಗಳ ಕಾವಲುನಾಯಿಯ ಕೆಲಸವನ್ನು ಕಾಂಗ್ರೆಸ್ ಮುಂದುವರಿಸಲಿದೆ. ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿ ರಚನಾತ್ಮಕ ಪಾತ್ರ ವಹಿಸಲಿದೆ

- ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT