ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿ ಈ ವರ್ಷದಿಂದ ಪ್ರಾರಂಭಿಸಿರುವ ‘ಕಲಾ ಸಂಕ್ರಾಂತಿ ಪುರಸ್ಕಾರ’ಕ್ಕೆ ರಾಷ್ಟ್ರಮಟ್ಟದ 14 ಕಲಾವಿದರನ್ನು ಆಯ್ಕೆ ಮಾಡಿದ್ದು, ₹1ಲಕ್ಷ ನಗದು, ಚಿನ್ನದ ಸ್ಮರಣಿಕೆಯನ್ನು ಪುರಸ್ಕಾರವು ಒಳಗೊಂಡಿದೆ.
ಅಕಾಡೆಮಿಯ ಸುವರ್ಣ ಮಹೋತ್ಸವದ ಅಂಗವಾಗಿ ಇದೇ 23ರಂದು ರಾಷ್ಟ್ರೀಯ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಅಂದು ಸಂಜೆ 6ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಎಂ.ಎಸ್. ಮೂರ್ತಿ
ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಆಯ್ಕೆ ಸಮಿತಿ ಮೊದಲ ಸುತ್ತಿನಲ್ಲಿ 117 ಕಲಾಕೃತಿಗಳನ್ನು ಆಯ್ಕೆ ಮಾಡಿತ್ತು. ಅಂತಿಮ ಸುತ್ತಿನಲ್ಲಿ 14 ಕಲಾಕೃತಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಬಳ್ಳಾರಿಯ ಶಿವಾನಂದ ಎಚ್. ಬಂಟನೂರು ಅವರ ‘ಸಮಕಾಲೀನ ಕನ್ನಡ ದೃಶ್ಯ ಕಲಾ ಸಾಹಿತ್ಯ’ ಕೃತಿಯನ್ನು ಕಲಾ ಸಾಹಿತ್ಯ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಮೆರಿಟ್ ಸರ್ಟಿಫಿಕೇಟ್ಗಾಗಿ 15 ಕಲಾಕೃತಿಗಳನ್ನು ಆಯ್ಕೆ ಮಾಡಿದೆ ಎಂದು ವಿವರಿಸಿದರು.
**
ಕಲಾ ಸಂಕ್ರಾಂತಿ ಬಹುಮಾನ ಪಡೆದವರು
ಕೋಲ್ಕತ್ತದ ಭೋಲನಾಥ್ ರುದ್ರ, ನವದೆಹಲಿಯ ಆಶಿಷ್ ಕುಶ್ವಾಹ(ವಾಟರ್ ಕಲರ್ ಆನ್ ಪೇಪರ್), ಗೋವಾದ ವಿತೇಶ್ ನಾರಾಯಣ ನಾಯ್ಕ, ನವದೆಹಲಿಯ ಶಹಾನ್ಶಾ ಮಿಠ್ಠಲ್, ಮುರ್ಷಿದಾಬಾದ್ನ ಸುಜಯ್ ಮಲಾಕರ್, ಛತ್ತೀಸಗಡದ ವಿಪಿನ್ ಸಿಂಗ್ ರಜಪೂತ್ (ಮಿಶ್ರ ಮಾಧ್ಯಮ), ಕರ್ನಾಟಕದ ವಿ. ಅಂಜಲಿ (ಪೋಸ್ಟಲ್ ಕಲರ್ ಆನ್ ಪೇಪರ್), ಗುಜರಾತ್ನ ಸಂಕೇತ್ಕುಮಾರ್ ಜಯಂತಿ ಲಾಲ್ ವಿರಾಂಗಮಿ(ಅಕ್ರಾಲಿನ್ ಆನ್ ಕ್ಯಾನ್ವಸ್), ನವದೆಹಲಿಯ ಜೆ.ಡಿ. ರಾವ್ ತಮ್ಮಿನೇನಿ, ಮಹಾರಾಷ್ಟ್ರದ ಸುಚೇತ ಮಾಧವ ರಾವ್ ಗಾಡ್ಗೇ, ಉತ್ತರ ಪ್ರದೇಶದ ಜಗ್ಜೀತ್ಕುಮಾರ್ ರೈ(ವುಡ್ ಕಟ್), ಛತ್ತೀಸಗಡದ ವಿಜಯಾ(ಟೆರ್ರಕೋಟಾ, ಸ್ಟೀಲ್, ಜ್ಯೂಟ್ ಮತ್ತು ವುಡ್), ಪಶ್ಚಿಮ ಬಂಗಾಳದ ಕಾಂಚನ್ ಕರ್ಜಿ(ವುಡ್ ಅಂಡ್ ವಾಟರ್ ಕಲರ್), ಪಶ್ಚಿಮ ಬಂಗಾಳದ ಅಕಿಲ್ ಚಂದ್ರ ದಾಸ್(ವುಡ್ ಅಂಡ್ ಬ್ರಾಂಝ್).