ಶ್ರೀನಗರ: ಇಲ್ಲಿನ ಪಂಥಾ ಚೌಕ್ ಬಳಿಯಿರುವ ಸಿಆರ್ಪಿಎಫ್ ಕಾವಲುಪಡೆ ಮೇಲೆ ಸೋಮವಾರ ಮಧ್ಯಾಹ್ನ ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಆರು ಮಂದಿ ಸಿಆರ್ಪಿಎಫ್ ಯೋಧರು ಗಾಯಗೊಂಡಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದೆರಡು ದಿನಗಳಲ್ಲಿ ರಕ್ಷಣಾ ಪಡೆ ಮೇಲೆ ನಡೆದ ಎರಡನೇ ದಾಳಿ ಪ್ರಕರಣವಾಗಿದೆ ಇದು.
ನಮ್ಮ ಸೈನಿಕರು ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆರು ಮಂದಿಗೆ ಗಾಯಗಳಾಗಿದ್ದು , ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಆರ್ಪಿಎಫ್ ಪಿಆರ್ಒ ಬಿ ಚೌಧರಿ ಹೇಳಿದ್ದಾರೆ.
ನಿನ್ನೆ ಪ್ರಧಾನಿ ನರಂದ್ರ ಮೋದಿ ಅವರು ಚೆನಾನಿ - ನಶ್ರಿ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಲು ಬಂದಿದ್ದಾಗ ಜಮ್ಮು ಕಾಶ್ಮೀರದಲ್ಲಿ ಅರೆಸೈನಿಕ ದಳದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಓರ್ವ ಪೊಲೀಸ್ ಸಾವಿಗೀಡಾಗಿದ್ದು 11 ಮಂದಿಗೆ ಗಾಯಗಳಾಗಿತ್ತು.